ಕೇಂದ್ರ ಬಜೆಟ್: ಕ್ರೈಸ್ಟ್ಗೆ ಐಬಿಎಸ್ ಬಹುಮಾನ
ನಗರದ ಪ್ರತಿಷ್ಠಿತ ಬಿ ವಸಿನೆಸ್ ಶಾಲೆ ಐಬಿಎಸ್ ಈಚೆಗೆ, ‘2011-12ನೇ ಸಾಲಿನ ಕೇಂದ್ರ ಬಜೆಟ್ ಶೇ 9ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲು ನೆರವಾಗುತ್ತದೆಯೇ?’ ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆ ಆಯೋಜಿಸಿತ್ತು.
ಮ್ಯಾಟ್ಸ್ ಐಎಂಇ, ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಎಕ್ಸ್ಐಎಂಇ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಕ್ರೈಸ್ಟ್ ವಿವಿ ಸೋನಾ ಜೋಸೆಫ್ ಮತ್ತು ಅಪರ್ಣಾ ರಾಜ್ ವಿಜೇತರಾಗಿ 10 ಸಾವಿರ ರೂ ನಗದು ಬಹುಮಾನ ಮತ್ತು ರೋಲಿಂಗ್ ಟ್ರೋಫಿ ತಮ್ಮದಾಗಿಸಿಕೊಂಡರು. ಅಲಯನ್ಸ್ ಬಿಸಿನೆಸ್ ಸ್ಕೂಲ್ನ ಅಭಿಷೇಕ್ ಶರ್ಮಾ ಮತ್ತು ಆಕಾಂಕ್ಷಾ ಸಿಂಗ್ ರನ್ನರ್ ಅಪ್ಗಳಾಗಿ 5 ಸಾವಿರ ರೂ. ನಗದು ಬಹುಮಾನ ಪಡೆದರು. ಇತರ ತಂಡಗಳಿಗೆ ಸ್ಮರಣ ಫಲಕ ನೀಡಲಾಯಿತು.
ಯುಬಿ ಸಮೂಹದ ಕಾರ್ಯಕಾರಿ ಉಪಾಧ್ಯಕ್ಷ ಎಸ್.ರಾಮಾನುಜನ್, ಐಸಿಐಸಿಐ ಮಣಿಪಾಲ್ ಅಕಾಡೆಮಿಯ ಡೀನ್ ಪ್ರೊ.ಟಿ.ಆರ್.ಶಾಸ್ತ್ರಿ, ಐಸೆಕ್ನ ಡಾ.ಕೆ.ಗಾಯತ್ರಿ ತೀರ್ಪುಗಾರರಾಗಿದ್ದರು.
‘ಕೇಂದ್ರ ಬಜೆಟ್ ಕುರಿತು ವಿದ್ಯಾರ್ಥಿಗಳಾದ ನಮಗೆ ಅಭಿಪ್ರಾಯ, ಆಲೋಚನೆ ವ್ಯಕ್ತಪಡಿಸಲು ಮತ್ತು ವಿಶ್ಲೇಷಣೆ ಮಾಡಲು ಐಬಿಎಸ್ ಅವಕಾಶ ಕಲ್ಪಿಸಿದೆ. ಮುನ್ನೋಟ ರೂಪಿಸುವುದು ಸುಲಭ. ಆದರೆ ಅನುಷ್ಠಾನ ಬಹಳ ಕಷ್ಟಕರ. ಅಂತಿಮ ಫಲಿತಾಂಶ ಅನುಷ್ಠಾನವನ್ನು ಆಧರಿಸಿದೆ ಎಂದು ನಮಗೆ ಗೊತ್ತು’ ಎಂದು ವಿಜೇತರು ಹೇಳಿದರು. ಎಂದಿನಂತೆ ಈಗ ಬಜೆಟ್ ಸಾರ್ವಜನಿಕರ ಗಮನ ಸೆಳೆಯುತ್ತಿಲ್ಲ. ಅಷ್ಟೇ ಅಲ್ಲದೆ ಇದರ ಕುರಿತು ಚರ್ಚೆಗಳೂ ನಡೆಯುತ್ತಿಲ್ಲ. ಆದ್ದರಿಂದ ಐಬಿಎಸ್ ಬೆಂಗಳೂರು ಈ ಬಗೆಯ ಚರ್ಚೆ ಆಯೋಜಿಸಿದ್ದು ಶ್ಲಾಘನೀಯ ಎಂದರು ಪ್ರೊ.ಶಾಸ್ತ್ರಿ.
ಬಜೆಟ್ಟನ್ನು ವಿದ್ಯಾರ್ಥಿ ಸಮುದಾಯ ಎಚ್ಚರಿಕೆಯಿಂದ ಗಮನಿಸಿ ಅದರ ಕುರಿತು ವಿದ್ಯಾರ್ಥಿಗಳು ತಮ್ಮದೇ ಆದ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು ಎಸ್.ರಾಮಾನುಜನ್.
‘ಶೈಕ್ಷಣಿಕ ಮತ್ತು ಕಾರ್ಪೊರೇಟ್ ಸಮುದಾಯದಲ್ಲಿ ಬಜೆಟ್ ಅಪಾರ ಗಮನ ಸೆಳೆಯುತ್ತದೆ. ಆದರೆ ಇದರಲ್ಲಿ ಭವಿಷ್ಯದ ಮ್ಯಾನೇಜರ್ಗಳ ಭಾಗವವಿಸುವಿಕೆ ಉತ್ತೇಜಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಐಬಿಎಸ್ ಬೆಂಗಳೂರು ನಗರದ ಬಿ ಸ್ಕೂಲ್ಗಳ ಯುವ ಮನಸ್ಸುಗಳನ್ನು ಒಂದೇ ವೇದಿಕೆಗೆ ತರುವ ಕಾರ್ಯಕ್ರಮ ಹಮ್ಮಿಕೊಂಡಿತು. ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ’ ಎಂದು ಐಬಿಎಸ್ ಬೆಂಗಳೂರು ನಿರ್ದೇಶಕರಾದ ಡಾ.ಲತಾ ಚಕ್ರವರ್ತಿ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.