ಕೊಳೆತ ಆಲೂಗಡ್ಡೆ ಬೀಜ ಸುರಿದು ಪ್ರತಿಭಟನೆ

ಹಾಸನ: ದುಬಾರಿ ದರ ಕೊಟ್ಟರೂ ವ್ಯಾಪಾರಿಗಳು ಕಳಪೆ ಗುಣಮಟ್ಟದ ಆಲೂಗಡ್ಡೆ ಬಿತ್ತನೆಬೀಜ ಕೊಟ್ಟಿದ್ದಾರೆ ಎಂದು ರೈತರು ತಾವು ಖರೀದಿಸಿದ್ದ ಬಿತ್ತನೆಬೀಜವನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಬೇಲೂರು ತಾಲ್ಲೂಕು ಹಗರೆಯ ಶಿವಯ್ಯ ಎಪಿಎಂಸಿ ಆವರಣದ ಮಂಜುನಾಥ ಟ್ರೇಡರ್ಸ್ನಿಂದ 24 ಚೀಲ ಬಿತ್ತನೆ ಆಲೂಗಡ್ಡೆ ಖರೀದಿ ಸಿದ್ದರು. ಅದರಲ್ಲಿ ಒಂದಿಷ್ಟನ್ನು ಬಿತ್ತನೆ ಮಾಡಿದರು. ಅದು ಮೊಳಕೆಯೊ ಡೆಯದೆ ನೆಲದಲ್ಲೇ ಕರಗಿಹೋಗಿತ್ತು. ಉಳಿದ ಆಲೂಗಡ್ಡೆಯನ್ನು ತುಂಡು ಮಾಡಿಟ್ಟು ಮಂಗಳವಾರ ಬಿತ್ತನೆ ಮಾಡಲು ಮುಂದಾಗಿದ್ದರು. ಆದರೆ, ಮಂಗಳವಾರ ಬೆಳಿಗ್ಗೆ ಆಲೂಗಡ್ಡೆ ಕೊಳೆತು ನಾರುತ್ತಿತ್ತು.
‘ಬೀಜದ ಗುಣಮಟ್ಟದ ಬಗ್ಗೆ ವ್ಯಾಪಾರಿಯನ್ನು ಕೇಳಿದಾಗ ಮೊದಲು ಹಣ ವಾಪಸ್ ಕೊಡುತ್ತೇನೆ ಎಂದಿದ್ದರು. ಸೋಮವಾರ ಹೋದರೆ ಉಡಾಫೆಯಿಂದ ಮಾತನಾಡಿದ್ದಾರೆ. ಆದ್ದರಿಂದ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ’ ಎಂದು ರೈತ ಶಿವಯ್ಯ ತಿಳಿಸಿದರು.
ಶಿವಯ್ಯ ಅವರ ಜೊತೆ ಬಂದಿದ್ದ ರೈತ ಸಂಘದ ಪದಾಧಿಕಾರಿ ಕುಮಾರ್, ‘ವ್ಯಾಪಾರಿಗಳು ಪಂಜಾಬ್ನಿಂದ ತಂದ ಆಲೂಗಡ್ಡೆ ಎಂದು ಸುಳ್ಳು ಹೇಳಿ ಸ್ಥಳೀಯ ಆಲೂಗಡ್ಡೆಯನ್ನು ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕ್ವಿಂಟಲ್ಗೆ ₨ 1,900 ರಿಂದ ₨ 2,000 ಮಿತಿಯಲ್ಲಿ ಬಿತ್ತನೆಬೀಜ ಮಾರಾಟ ಮಾಡಬೇಕು ಎಂದು ನಿಗದಿಯಾಗಿದ್ದರೂ ಅದಕ್ಕಿಂತ ಹೆಚ್ಚು ಬೆಲೆ ಪಡೆಯುತ್ತಿದ್ದಾರೆ. ಒಂದು ಚೀಲದಲ್ಲಿ 50 ಕೆ.ಜಿ ಇದೆ ಎಂದು ಹೇಳಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಒಂದು ಚೀಲದಲ್ಲಿ 45 ಕೆಜಿ ಆಲೂಗಡ್ಡೆ ಮಾತ್ರ ಇರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ವಿಶೇಷ ಗಮನಹರಿಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.
ರೈತರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಏಕಾಂಗಿ ಪ್ರತಿಭಟನೆ: ಆಲೂಗಡ್ಡೆ ಬಿತ್ತನೆಬೀಜ ಮಾರಾಟಗಾರರು ಟಿನ್ ನಂಬರ್ ಹೊಂದಿರುವ ಬಿಲ್ ನೀಡುವುದನ್ನು ಕಡ್ಡಾಯ ಮಾಡುವಂತೆ ಆಗ್ರಹಿಸಿ ಹೊ.ತಿ. ಹುಚ್ಚಪ್ಪ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ‘ಏಕಾಂಗಿ ಪ್ರತಿಭಟನೆ’ ನಡೆಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.