ಗದಗದಲ್ಲಿ ತುಂಬುತ್ತಿದೆ ಅಲೆಮಾರಿಗಳ ತುತ್ತಿನ ಚೀಲ

ಗದಗ: ದುಡಿಯುವ ಮನಸ್ಸು ಉಳ್ಳವರಿಗೆ ಊರು, ಭಾಷೆ ಯಾವುದಾದರೇನು. ಕಸುಬು ಗೊತ್ತಿರುವ ಕೈಗಳು ಅರಿತಿರುವ ಕೆಲಸವೇ ಸಾಕು. ರಾಜಸ್ಥಾನದ ಕುಗ್ರಾಮ ಗುಣದಿಂದ ಬಂದಿರುವ ಲಂಬಾಣಿ ಕುಟುಂಬಗಳು ಊರೂರು ಅಲೆದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಶ್ರಮ ವಹಿಸುತ್ತಿವೆ.
ನಗರದ ಪುಟ್ಟರಾಜ ಗವಾಯಿ ಮೂರ್ತಿ ವೃತ್ತದ ಬಳಿಯ ವೀರೇಶ್ವರ ಲೈಬ್ರರಿ ರಸ್ತೆ ಬದಿಯಲ್ಲಿ ಬಿಡಾರ ಹೂಡಿರುವ ಈ ಕುಟುಂಬ ಗಳು ಕುಲ ಕಸುಬಾದ ಕೃಷಿ ಸಲಕರಣೆಗಳ ತಯಾರಿ ಮತ್ತು ದುರಸ್ತಿಯಲ್ಲಿ ತೊಡಗಿಸಿ ಕೊಂಡು ಅನ್ನದ ದಾರಿ ಕಂಡು ಕೊಂಡಿದ್ದಾರೆ. ಇದೇ ರೀತಿ ಅಲೆಮಾರಿ ಕುಟುಂಬಗಳು ಬೆಟಗೇರಿಯಲ್ಲೂ ಕ್ಯಾಂಪ್ ಹಾಕಿವೆ.
ಕಸುಬಿಗೆ ಅಗತ್ಯವಾದ ಇದ್ದಲು, ಚಮ್ಮಟಿಕೆ, ಇಕ್ಕಳ, ಕೈ ಸುತ್ತಿಗೆ, ಕೊಡಲಿ, ಹುಳಿ ಸೇರಿದಂತೆ ವಿವಿಧ ಉಪಕರಣಗಳನ್ನು ಮಾರಾಟ ಮಾಡುತ್ತಾರೆ. ಜನರು ಇವರಿಂದ ಕೊಡಲಿ, ಸುತ್ತಿಗೆ, ಕುಡಗೋಲು ಮತ್ತಿತ್ತರ ಸಲಕರಣೆ ಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಸಲಕರಣೆಗಳಿಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ. ಜೋಡಿ ಕೊಡಲಿಗೆ ₨ 300ರಿಂದ 500, ಹುಳಿ ₨ 250 ಹೀಗೆ ಒಂದೊಂದು ವಸ್ತುವಿಗೆ ದರ ನಿಗದಿ ಮಾಡಿ ದ್ದಾರೆ. ದಿನಕ್ಕೆ ಒಂದೂವರೆ ಸಾವಿರದವರೆಗೆ ಹಣ ಸಂಪಾದಿಸುತ್ತಾರೆ. ಶ್ರಮಜೀವಿ ಕುಟುಂಬದ ಸದಸ್ಯರು ಮೂರು ಹೊತ್ತಿನ ಊಟಕ್ಕೂ ಅವಲಂ ಬಿಸಿರುವುದು ರೊಟ್ಟಿ, ಪರೋಟ ಮಾತ್ರವೇ. ಹಿಂದಿ ಮಾತನಾಡುವ ಇವರ ಭಾಷೆ ಸ್ಥಳೀಯರಿಗೆ ಅರ್ಥವಾಗುವುದಿಲ್ಲ. ಅವರೊಂದು ಬೆಲೆ ಹೇಳಿದರೆ ಇವರೊಂದು ಬೆಲೆಗೆ ಕೇಳುತ್ತಾರೆ. ಒಟ್ಟಿ ನಲ್ಲಿ ತಮಗೆ ತಿಳಿದ ರೀತಿಯಲ್ಲಿ ಅರ್ಥ ಮಾಡಿಕೊಂಡು ವ್ಯವಹಾರಿಸುತ್ತಾರೆ.
ನಗರಕ್ಕೆ ಬಂದಿರುವ ನಾಲ್ಕು ಕುಟುಂಬಗಳು ಒಂದೊಂದು ಪ್ರದೆಶದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅಲೆಮಾರಿ ಕುಟುಂಬದ ಮಕ್ಕಳಿಗೆ ಶಾಲೆ, ಶಿಕ್ಷಣದ ಅರಿವೇ ಇಲ್ಲ. ಕುಟುಂಬದ ಹಿರಿಯರ ಜತೆ ಕೈ ಜೋಡಿಸುತ್ತಾರೆ. ಹಿಗೇಯೇ ಮಕ್ಕಳು ಸಹ ಹಿರಿಯರಿಂದ ಕುಲಕಸುಬು ಕಲಿಯುತ್ತಿ ದ್ದಾರೆ. ಮಹಿಳೆಯರು ಸಹ ಪುರುಷರಷ್ಟೇ ಸರಿಸಮನಾರಾಗಿ ದುಡಿದು ಯಜಮಾನನಿಗೆ ನೆರವಾಗುತ್ತಾರೆ.
ಗುಡಾರ ನಿರ್ಮಿಸಿಕೊಳ್ಳದೇ ಬಯಲು ಪ್ರದೇಶ ಗಳಲ್ಲಿಯೇ ಬಿಸಿಲು, ಮಳೆ ಎನ್ನದೇ ಹಗಲು–ರಾತ್ರಿ ಕಳೆಯತ್ತಾರೆ. ಮಹಿಳೆಯರು, ಮಕ್ಕಳು ಕೂಡ ಬಯಲಲ್ಲೇ ಮಲಗಬೇಕು. ಹೀಗಾಗಿ ಈ ಕುಟುಂಬಕ್ಕೆ ಆಕಾಶವೇ ಹೊದಿಕೆ, ಭೂಮಿಯೇ ಹಾಸಿಗೆ.
ಈಗಾಗಲೇ ದೇಶದ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಕೆಲಸ ಮುಗಿಸಿಕೊಂಡು ಬಂದಿರುವ ಈ ಅಲೆಮಾರಿ ಕುಟುಂಬ ಮುಂದಿನ ದಿನಗಳಲ್ಲಿ ಬಾದಮಿ ಜಿಲ್ಲೆಗೆ ತೆರೆಳಲಿದೆ.
‘ನಮ್ಮ ಊರು ಗುಣ ಬಿಟ್ಟು ಆರು ತಿಂಗಳಾಗಿದೆ. ಜಮೀನು ಇಲ್ಲ, ಕುಡಿಯಲು ನೀರು ಇಲ್ಲ. ಹೀಗಿರುವಾಗ ಜೀವನ ನಡೆಸುವುದು ಕಷ್ಟ. ಊರು ಊರು ಅಲೆದು ದುಡಿದು ಜೀವನ ಸಾಗಿಸುತ್ತಿದ್ದೇವೆ. ಹಿರಿಯರು ಮಾತ್ರ ಊರಿನಲ್ಲೇ ವಾಸವಿದ್ದಾರೆ. ವರ್ಷದಲ್ಲಿ ಒಮ್ಮೆ ಊರಿಗೆ ಹೋಗಿ ಸ್ವಲ್ಪ ದಿನ ಇದ್ದು ಮತ್ತೆ ನಮ್ಮ ಕೆಲಸಕ್ಕೆ ಬೇರೆ ಊರಿಗೆ ಹೊರುಡುತ್ತೇವೆ. ದುಡಿಮೆಯಿಂದ ಬಂದ ಹಣದಿಂದ ಜೀವನ ಸಾಗಿಸುತ್ತೇವೆ’ ಎನ್ನುತ್ತಾರೆ ಅಲೆಮಾರಿ ಕುಟಂಬದ ಸದಸ್ಯ ಸಿಂಧೆ ಲಾಲ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.