ಬೆಂಗಳೂರು: ಕರ್ನಾಟಕ ನೀರಾವರಿ ನಿಗಮ ಕೈಗೆತ್ತಿಕೊಂಡಿರುವ ಕೆಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಜೆಡಿಎಸ್ನ ಬಸವರಾಜ ಹೊರಟ್ಟಿ ವಿಧಾನ ಪರಿಷತ್ತಿನಲ್ಲಿ ಮಾಡಿದ ಆಗ್ರಹ, ಕೆಲ ಕಾಲ ಕುತೂಹಲಕಾರಿ ಚರ್ಚೆಗೂ ಮೂಲವಾಯಿತು.
ತಮ್ಮ ಆಗ್ರಹ ಕುರಿತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರದಿಂದ ತೃಪ್ತರಾಗದ ಹೊರಟ್ಟಿ, `ನೀವು ಮೊದಲು ನಮ್ಮಲ್ಲೇ (ಜನತಾ ಪರಿವಾರ) ಇದ್ದವರು. ಈಗ ಡೆಪ್ಯುಟೇಷನ್ ಮೇಲೆ ಬಿಜೆಪಿಗೆ ಹೋಗಿದ್ದೀರಿ~ ಎಂದು ಕಿಚಾಯಿಸಿದರು.
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ನ ವೀರಣ್ಣ ಮತ್ತಿಕಟ್ಟಿ, `ಆಪರೇಷನ್ ಕಮಲದ ಕಾರಣ ಬಿಜೆಪಿ ಎಲ್ಲ ಪಕ್ಷಗಳ ಸದಸ್ಯರ ಕಲಸು ಮೇಲೋಗರವಾಗಿದೆ. ಹಾಗೆ ನೋಡಿದರೆ, ಎಲ್ಲ ಪಕ್ಷಗಳಲ್ಲೂ ಮೂಲ ಕಾಂಗ್ರೆಸ್ಸಿಗರು ಇದ್ದಾರೆ. ಹೊರಟ್ಟಿ ಅವರೂ ಒಂದು ಕಾಲದಲ್ಲಿ ನಮ್ಮಂದಿಗೇ ಬೆಳೆದವರು~ ಎಂದರು.
`ಅದು ನಿಜ. ಆರ್ಎಸ್ಎಸ್ ಸ್ಥಾಪಕ ಕೇಶವ ಬಲಿರಾಂ ಹೆಡ್ಗೇವಾರ್ ಕೂಡ ಒಂದು ಕಾಲದಲ್ಲಿ ಕಾಂಗ್ರೆಸ್ನಲ್ಲೇ ಇದ್ದವರು. ಅಂದಿನ ಕಾಂಗ್ರೆಸ್ಸೇ ಬೇರೆ. ಇಂದಿನ ಕಾಂಗ್ರೆಸ್ಸೇ ಬೇರೆ~ ಎಂದು ಬಿಜೆಪಿಯ ಗೋ. ಮಧುಸೂದನ್ ದನಿಗೂಡಿಸಿದರು. ಆದರೆ ಇಂದಿನ ಕಾಂಗ್ರೆಸ್ `ಮಧಸೂದನ್ ಕಾಂಗ್ರೆಸ್~ ಅಲ್ಲ ಎಂದು ಮತ್ತಿಕಟ್ಟಿ ಸ್ಪಷ್ಟನೆ ನೀಡಿದರು.
`ಇಲ್ಲ ನಿಮ್ಮದು ಮಧುಸೂದನ್ ಮಿಸ್ತ್ರಿ ಕಾಂಗ್ರೆಸ್~ ಎಂದು ಗೋ. ಮಧುಸೂದನ್ ಹಾಸ್ಯ ಮಾಡಿದರು. ಚರ್ಚೆ ಹಳಿತಪ್ಪುತ್ತಿರುವುದನ್ನು ಗಮನಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, `ಯಾವ ನಿಯಮದ ಅಡಿ ಈ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದೀರಿ~ ಎಂದು ಪ್ರಶ್ನಿಸಿದರು. ಟೆಂಡರ್ ಪ್ರಕ್ರಿಯೆ ಕುರಿತು ಚರ್ಚೆ ಮುಂದುವರಿಸುವಂತೆ ಸೂಚಿಸಿದರು.