ನಮ್ಮ ಶಾಲೆಗಿಂತ ನಿಮ್ಮ ರ್ಯಾಲಿ ಮುಖ್ಯವೇ?: ಮೋದಿಗೆ ವಿದ್ಯಾರ್ಥಿಯ ಪ್ರಶ್ನೆ

ಖಾಂಡ್ವಾ (ಪಿಟಿಐ): ರಾಜಕೀಯ ಪಕ್ಷಗಳ ರ್ಯಾಲಿಗಳನ್ನು ಪ್ರಶ್ನಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿರುವಾಗ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವ ರ್ಯಾಲಿ ಬಗ್ಗೆಯೇ ಪ್ರಶ್ನಿಸಿದ್ದಾನೆ.
ಅಲಿರಾಜ್ಪುರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೆ ಜನರನ್ನು ಕರೆದೊಯ್ಯಲು ಶಾಲಾ ಬಸ್ಗಳನ್ನು ಬಳಸುವುದನ್ನು ಪ್ರಶ್ನಿಸಿ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಮೋದಿಯವರಿಗೆ ಪತ್ರ ಬರೆದಿದ್ದಾನೆ.
ಖಾಂಡ್ವಾದಲ್ಲಿರುವ ವಿದ್ಯಾಕುಂಜ್ ಶಾಲೆಯ ದೇವಾಂಶ್ ಜೈನ್ ಎಂಬ ವಿದ್ಯಾರ್ಥಿ ಈ ಪತ್ರ ಬರೆದಿದ್ದಾನೆ. ಆಗಸ್ಟ್ 9, 10 ರಂದು ಶಾಲೆಗೆ ರಜೆ ಇರುತ್ತದೆ ಎಂದು ಶಿಕ್ಷಕರು ಹೇಳಿದಾಗ ರಜೆಯ ಕಾರಣ ದೇವಾಂಶ್ಗೆ ತಿಳಿದಿರಲಿಲ್ಲ. ಇದರ ಕಾರಣ ಏನೆಂದು ಪತ್ತೆ ಮಾಡಿದಾಗ ಮೋದಿಯವರ ರ್ಯಾಲಿಗೆ ಜನರನ್ನು ಕರೆದೊಯ್ಯಲು ಶಾಲಾ ಬಸ್ ಬಳಸಲು ಆದೇಶ ಬಂದಿದೆ ಎಂಬ ಸುದ್ದಿ ತಿಳಿದು ಬಂದಿತ್ತು.
ಹಾಗಾಗಿ, ಈ ಬಗ್ಗೆ ದೇವಾಂಶ್ ಪ್ರಧಾನಿಯವರಿಗೇ ಪತ್ರ ಬರೆದಿದ್ದಾನೆ. ಪತ್ರದ ಒಕ್ಕಣೆ ಹೀಗಿದೆ.
ಮೋದಿ ಅಂಕಲ್, ನನ್ನ ಶಾಲೆಗಿಂತ ನಿಮ್ಮ ರ್ಯಾಲಿ ಮುಖ್ಯವೇ? ಅಮೆರಿಕದಲ್ಲಿ ತಾವು ಮಾಡಿದ್ದ ಭಾಷಣವನ್ನು ನಾನು ಕೇಳಿದ್ದೇನೆ. ಅಲ್ಲಿ ನಿಮ್ಮ ಭಾಷಣ ಕೇಳಲು ಸಾಕಷ್ಟು ಜನರು ಬಂದಿದ್ದರು. ಆದರೆ ಅವರ್ಯಾರೂ ಶಾಲಾ ಬಸ್ನಲ್ಲಿ ಆ ಸ್ಥಳಕ್ಕೆ ಆಗಮಿಸಿರಲಿಲ್ಲ. ನಾನು ನಿಮ್ಮ ಅಭಿಮಾನಿ. ನಿಮ್ಮ ರೆಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಕೇಳುವುದನ್ನು ನಾನು ತಪ್ಪಿಸಿಕೊಂಡಿಲ್ಲ. ನಿಮ್ಮ ಅಭಿಮಾನಿಯಾಗಿದ್ದಕ್ಕೆ ಸಹಪಾಠಿಗಳು ಗೇಲಿ ಮಾಡುವಾಗ ನಾನು ಅವರೊಂದಿಗೆ ಜಗಳಕ್ಕಿಳಿದದ್ದೂ ಉಂಟು. ನೀವು ಕಾಂಗ್ರೆಸ್ ನೇತಾರರಂತೆ ಅಲ್ಲ. ನಮ್ಮ ಶಿಕ್ಷಣದ ಬಗ್ಗೆ ಮತ್ತು ನಮ್ಮ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇದೆ. ಆದ್ದರಿಂದ ರ್ಯಾಲಿಗೆ ಜನರನ್ನು ಕರೆದೊಯ್ಯಲು ಶಾಲಾ ಬಸ್ಗಳನ್ನು ಬಳಸಬೇಡಿ.
ದೇವಾಂಶ್ ಬರೆದ ಈ ಪತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರ್ಯಾಲಿಗಾಗಿ ಶಾಲಾ ಬಸ್ಗಳನ್ನು ಬಳಸುವ ಆದೇಶವನ್ನು ಜಿಲ್ಲಾಧಿಕಾರಿ ರದ್ದು ಪಡಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.