ಪರಿಷೆ ಊಟ : 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮದ್ದೂರು: ಇಲ್ಲಿಗೆ ಸಮೀಪದ ಉಪ್ಪಾರದೊಡ್ಡಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾಳಮ್ಮದೇವಿ ಪರಿಷೆಯಲ್ಲಿ ತಯಾರಿಸಲಾಗಿದ್ದ ವಿಷಯುಕ್ತ ಊಟ ಸೇವಿಸಿ 500ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದೆ.
ಪ್ರತಿ ವರ್ಷ ಏರ್ಪಡಿಸುವ ದೇವಿಯ ಪರಿಷೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಎಲ್ಲರೂ ಸಾಮೂಹಿಕ ಭೋಜನದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಸುತ್ತಮುತ್ತಲಿನ ಗ್ರಾಮಗಳಾದ ಚನ್ನಸಂದ್ರ, ಮಾಲಗಾರನಹಳ್ಳಿ, ಸೋಂಪುರ, ಗೊರವನಹಳ್ಳಿ, ಉಪ್ಪಿನಕೆರೆ, ನಗರಕೆರೆ ಸೇರಿದಂತೆ 8 ಹಳ್ಳಿಗಳ 20 ಸಾವಿರ ಜನರಿಗೆ ಈ ಬಾರಿ ರಾಗಿ ಮುದ್ದೆ ಹಾಗೂ ಅವರೆಕಾಳಿನ ಕೂಟು ಭೋಜನ ಸಿದ್ಧಪಡಿಸಲಾಗಿತ್ತು.
ಸೋಮವಾರ ಪರಿಷೆಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದ 15 ಸಾವಿರಕ್ಕೂ ಹೆಚ್ಚು ಮಂದಿ ಊಟ ಸೇವಿಸಿ ಮನೆಗೆ ತೆರಳಿದ್ದರು. ಸಂಜೆಯಾಗುತ್ತಿದ್ದಂತೆ ಊಟ ಮಾಡಿದ ನೂರಾರು ಮಂದಿ ವಾಂತಿ ಮಾಡಿಕೊಂಡು ಅಸ್ವಸ್ಥರಾದರು. ಅವರೆಕಾಳು ಕೂಟಿಗೆ ಬಳಸಲಾಗಿದ್ದ ಕಲಬೆರಕೆ ಎಣ್ಣೆಯಿಂದ ಈ ಅನಾಹುತ ಜರುಗಿದೆ ಎನ್ನಲಾಗಿದೆ.
ಕೂಡಲೇ ಗ್ರಾಮದ ಮುಖಂಡರು ಟ್ರಾಕ್ಟರ್, ಆಟೋ ಇನ್ನಿತರ ವಾಹನಗಳಲ್ಲಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಸಾಗಿಸಿದರು. ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಲಾಯಿತು. ಇವರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ 300ಕ್ಕೂ ಹೆಚ್ಚು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ಹಾಗೂ ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.