ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ

ನವದೆಹಲಿ (ಪಿಟಿಐ): ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟದ ಒಟ್ಟು 56,825 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ‘ಜೀವವೈವಿಧ್ಯ ಸೂಕ್ಷ್ಮ ಪರಿಸರ ಪ್ರದೇಶ’ ಎಂದು ಕೇಂದ್ರ ಪರಿಸರ ಸಂರಕ್ಷಣಾ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತಾಧಿಕಾರ ಸಮಿತಿಯು ಕೇರಳದ 13,108 ಕಿ.ಮೀ ಚದರ ಅಡಿ ಅರಣ್ಯ ಪ್ರದೇಶವನ್ನು ಜೀವವೈವಿಧ್ಯ ಸೂಕ್ಷ್ಮ ಪರಿಸರ ಪ್ರದೇಶ ವ್ಯಾಪ್ತಿ ಸೇರಿಸುವಂತೆ ಶಿಫಾರಸು ಮಾಡಿತ್ತು. ಕೇರಳದ 123 ಗ್ರಾಮಗಳು ಮತ್ತು ಕೃಷಿಯೋಗ್ಯ ಭೂಮಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಕೈಬಿಡುವಂತೆ ಯುಡಿಎಫ್ ನೇತೃತ್ವದ ಕೇರಳ ಸರ್ಕಾರ ಕೇಂದ್ರದ ಮೇಲೆ ಭಾರಿ ಒತ್ತಡ ತಂದಿತ್ತು.
ಸ್ಥಳೀಯರ ವ್ಯಾಪಕ ವಿರೋಧದ ಹಿನ್ನೆಲೆ ಹಾಗೂ ಕೇರಳ ಸರ್ಕಾರದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಸಾವಿರ ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಅಧಿಸೂಚನೆಯಿಂದ ಕೈಬಿಟ್ಟಿದೆ.ಹೊಸ ಅಧಿಸೂಚನೆಯ ಪ್ರಕಾರ ಕೇರಳದಲ್ಲಿ ಒಟ್ಟು 9993.7 ಚದರ ಕಿ.ಮೀ ಪ್ರದೇಶವನ್ನು ಜೀವವೈವಿಧ್ಯ ಸೂಕ್ಷ್ಮ ಪರಿಸರ ಪ್ರದೇಶ ವ್ಯಾಪ್ತಿಗೆ ಸೇರಿಸಲಾಗಿದೆ. ಆ ಪೈಕಿ 9107 ಚದರ ಕಿ.ಮೀ ಅರಣ್ಯ ಪ್ರದೇಶ ಮತ್ತು 886.7 ಚದರ ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ.
ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತಾಧಿಕಾರ ಸಮಿತಿಯು 6 ರಾಜ್ಯಗಳ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟದ ಶೇ 37ರಷ್ಟು (59,940 ಚರ ಕಿ.ಮೀ) ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು.ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಬೃಹತ್ ಕೈಗಾರಿಕೆಗಳು, ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸೇರಿದಂತೆ ಯಾವುದೇ ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ಮಾಣ ಕಾರ್ಯಗಳಿಗೆ ಈ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಅನುಮತಿ ಹಾಗೂ ಅವಕಾಶ ನೀಡದಂತೆ ಅಧಿಸೂಚನೆ ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ 1,600 ಕಿ.ಮೀ ಉದ್ದಕ್ಕೆ ಪಶ್ಚಿಮ ಘಟ್ಟ ಹರಡಿಕೊಂಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.