ಬಸವೇಶ್ವರ ಆಸ್ಪತ್ರೆ: ಅಪರೂಪದ ಶಸ್ತ್ರಚಿಕಿತ್ಸೆ
ಗುಲ್ಬರ್ಗ: ನಗರದ ಬಸವೇಶ್ವರ ಆಸ್ಪತ್ರೆಯ ಮೂಳೆರೋಗ ವಿಭಾಗದ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಇಬ್ಬರು ರೈತರನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ವಿಪರೀತ ಚಪ್ಪೆ ನೋವಿನಿಂದ ನರಳುತ್ತಿದ್ದ 42 ವರ್ಷದ ಆಳಂದ ತಾಲ್ಲೂಕಿನ ಧಂಗಾಪುರ ಗ್ರಾಮದ ರೈತ ಅಮೃತ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಎಕ್ಸ್ ರೇ ಮಾಡಿದಾಗ, ಚಪ್ಪೆಗಳನ್ನು ಬದಲಾಯಿಸುವ ಅನಿವಾರ್ಯತೆಯನ್ನು ಡಾ. ಲವಕುಮಾರ ಲೋಯಾ ಪತ್ತೆ ಮಾಡಿದರು.
ಅರಿವಳಿಕೆ ತಜ್ಞ ಡಾ. ಅವಟಿ ಅವರ ನೆರವಿನೊಂದಿಗೆ ಶಸ್ತ್ರಚಿಕಿತ್ಸೆ ಮಾಡಿ, ಚಪ್ಪೆ ಸಂಧುಗಳಲ್ಲಿನ ಗಂಟುಗಳನ್ನು ಬದಲಾಯಿಸಿದರು. ಐದು ದಿನಗಳಲ್ಲಿ ರೋಗಿ ಎದ್ದು ನಡೆದಾಡುವಂತಾಗಿದ್ದಾರೆ ಎಂದು ವಿಭಾಗದ ಮುಖ್ಯಸ್ಥ ಡಾ. ಬಿ.ಸಿ. ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಆಳಂದ ತಾಲ್ಲೂಕಿನ ತೆಲ್ಲೂರ ಗ್ರಾಮದ 57 ವಯಸ್ಸಿನ ರೈತ ವಿಠ್ಠಲ ಜು.4ರಂದು ರಸ್ತೆ ಅಪಘಾತಕ್ಕೀಡಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಬಲಗಾಲಿನ ಎಲುಬುಗಳೆರಡು ಹೊರಗೆ ತೆರೆದುಕೊಂಡು ಭಾರಿ ಗಾಯ ಮಾಡಿಕೊಂಡಿದ್ದರು. ಮಧುಮೇಹದಿಂದ ಬಳಲುತ್ತಿದ್ದ ವಿಠ್ಠಲ ಅವರ ಕಾಲಿನ ಶಸ್ತ್ರಚಿಕಿತ್ಸೆಯನ್ನು ಪ್ಲಾಸ್ಟಿಕ್ ಸರ್ಜನ್ ಡಾ. ಅನಿಲಕುಮಾರ ಮಲ್ಹಾರಿ ಹಾಗೂ ಮೂಳೆರೋಗ ವಿಭಾಗದ ವೈದ್ಯರು ಸವಾಲಾಗಿ ತೆಗೆದುಕೊಂಡರು.
ಮೂಳೆ ರೋಗಕ್ಕೆ ಸಂಬಂಧಿಸಿದ ಯಾವುದೇ ಚಿಕಿತ್ಸೆಯನ್ನು ಕೈಗೊಳ್ಳಲು ಬಸವೇಶ್ವರ ಆಸ್ಪತ್ರೆಯ ವೈದ್ಯರ ತಂಡ ಅನುಭವ ಹೊಂದಿದೆ. ಹೀಗಾಗಿ ಈ ಭಾಗದ ರೋಗಿಗಳು ಹೈದರಾಬಾದ್ ಹಾಗೂ ಸೋಲ್ಲಾಪುರಕ್ಕೆ ಹೋಗುವ ಅನಿವಾರ್ಯತೆ ಇಲ್ಲ ಎಂದರು. ಶಸ್ತ್ರಚಿಕಿತ್ಸೆ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ರವೀಂದ್ರ ದೇವಣಿ, ನಾಗರಾಜು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.