ಬೆಂಗಳೂರಿನ ಒಳಗೆ ಕೆಎಸ್ಆರ್ಟಿಸಿ,ಖಾಸಗಿ ಬಸ್ ಪ್ರವೇಶ ನಿಷೇಧ

ಬೆಂಗಳೂರು: ಫೆ. 1 ರಿಂದ 10ರ ವರೆಗೆ ನಗರದ ಒಳಗೆ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಪ್ರವೇಶವನ್ನು ಸಾರಿಗೆ ಇಲಾಖೆ ನಿರ್ಬಂಧಿಸಿದೆ.
ಬಂಡವಾಳ ಹೂಡಿಕೆದಾರರ ಸಮಾವೇಶದ ವೇಳೆ ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ನಿಯಂತ್ರಿಸುವುದು ಇದರ ಉದ್ದೇಶ ಎನ್ನಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ, ‘ಬಸ್ಗಳು ರಾತ್ರಿ 11 ಗಂಟೆಯಿಂದ ಬೆಳಗಿನ 4 ಗಂಟೆ ವರೆಗೆ ಮಾತ್ರ ನಗರವನ್ನು ಪ್ರವೇಶಿಸಬಹುದಾಗಿದೆ. ಇದು ಹೊರ ರಾಜ್ಯಗಳ ಬಸ್ಗಳಿಗೂ ಅನ್ವಯಿಸುತ್ತದೆ’ ಎಂದು ಹೇಳಿದರು.
ಮೆಜೆಸ್ಟಿಕ್ನಿಂದ ಕಾರ್ಯಾಚರಣೆ ನಡೆಸುತ್ತಿದ್ದ ಬಸ್ಗಳು ನಿರ್ಬಂಧದ ಪರಿಣಾಮವಾಗಿ ಪೀಣ್ಯ ನಿಲ್ದಾಣದಿಂದ ಸಂಚರಿಸಲಿವೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.
ನಿರ್ಬಂಧಕ್ಕೆ ಅಸಮಾಧಾನ: ಸಾರಿಗೆ ಇಲಾಖೆಯ ಈ ನಿಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಖಾಸಗಿ ಬಸ್ ಮಾಲೀಕರು, ಪ್ರಾಯೋಗಿಕ ಯೋಜನೆ ನೆಪದಲ್ಲಿ ನಗರದೊಳಗೆ ಶಾಶ್ವತವಾಗಿ ಖಾಸಗಿ ಬಸ್ಗಳು ಬರದಂತೆ ಮಾಡುವುದು ಸಾರಿಗೆ ಹಾಗೂ ಸಂಚಾರ ಪೊಲೀಸರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಕಟ್ಟಡದಲ್ಲಿ ಸಾರಿಗೆ ಇಲಾಖೆ ಹಾಗೂ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಸಾರಿಗೆ ಇಲಾಖೆಯ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಿರ್ಬಂಧ ಸಡಿಲಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಅವರ ಕೋರಿಕೆಯನ್ನು ಸಾರಿಗೆ ಅಧಿಕಾರಿಗಳು ಸರಾಸಗಟಾಗಿ ತಳ್ಳಿಹಾಕಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮೇಗೌಡ, ‘10 ದಿನ ಈ ನಿರ್ಬಂಧವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಇದನ್ನು ವಿಸ್ತರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುತ್ತದೆ’ ಎಂದರು.
‘ನಗರದ ಹೊರವಲಯದಲ್ಲಿ ನಿಗದಿತ ಸ್ಥಳ ಗುರುತಿಸಿ, ಅಲ್ಲಿಯವರೆಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಅಲ್ಲಿಂದ ಪ್ರಯಾಣಿಕರನ್ನು ಕರೆತರಲು ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.