ಭತ್ತ, ರಾಗಿ ಖರೀದಿಗೆ ಒತ್ತಾಯ; ಪ್ರತಿಭಟನೆ

ಕೆ.ಆರ್.ಪೇಟೆ: ಪಟ್ಟಣದ ರಾಗಿ ಮತ್ತು ಭತ್ತ ಖರೀದಿ ಕೇಂದ್ರದಲ್ಲಿ ರೈತರ ದಾಸ್ತನು ಖರೀದಿಗೆ ನಿರಾಕರಿಸಿದ ರಾಜ್ಯ ಆಹಾರ ಸರಬರಾಜು ನಿಗಮದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ನೂರಾರು ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಲ್ಲಾ ರಸ್ತೆಗಳನ್ನು ತಡೆ ಮಾಡಿದ ರೈತರು ಪ್ರವಾಸಿ ಮಂದಿರ ವೃತ್ತದಲ್ಲಿ ತಾವು ತಂದಿದ್ದ ರಾಗಿ -ಭತ್ತದ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್್್ ಸಮೇತ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ರೈತರು ಬೆಳೆದ ಕೃಷಿ ಹುಟ್ಟುವಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಆರಂಭಿಸಿರುವ ಭತ್ತ ಹಾಗೂ ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳು ಹಾಗೂ ದಳ್ಳಾಳಿಗಳ ಹಾವಳಿ ತಪ್ಪಿಸಿ ರೈತರು ಬೆಳೆದಿರುವ ಭತ್ತ-ರಾಗಿಯನ್ನು ಮಾತ್ರ ಖರೀದಿ ಆರಂಭಿಸುವಂತೆ ಆಗ್ರಹಿಸಿದರು.
ಆದರೆ, ಇದಕ್ಕೆ ಅಧಿಕಾರಿಗಳು ಸ್ಪಂದಿಸಿದಿದ್ದಾಗ ರೈತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಪ್ರವಾಸಿ ಮಂದಿರದ ಬಳಿ ರಸ್ತೆ ತಡೆ ನಡೆಸಿದ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಪ್ರಯಾಣಿಕರು ಪಟ್ಟಣ ಪ್ರವೇಶಸಲು ಸಾಕಷ್ಟು ಸಮಸ್ಯೆ ಉಂಟಾಯಿತು.
ವಿಷಯ ತಿಳಿದು ಬಂದ ಪೋಲಿಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ರೈತರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಿದರು.
ಮೊದಲು ಗಾಡಿಯಲ್ಲಿರುವ ಧಾನ್ಯಗಳು, ನಂತರ ಟ್ರ್ಯಾಕ್ಟರ್ ಆನಂತರ ಲಾರಿಯಲ್ಲಿರುವ ಧಾನ್ಯಗಳನ್ನು ಖರೀದಿಸಲು ಕ್ರಮ ವಹಿಸಿಲಾಗುವುದು ಎಂದು ಶಿರಸ್ತೇದಾರ್ ಗೋಪಾಲ್,ಸಿಪಿಐ ಡಿ. ಯೋಗೀಶ್, ಟಿ.ಎಂ. ಪುನೀತ್ ಭರವಸೆ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.