ಭಾನುವಾರ, 6-6-1961
ಮಟಾಡಿ ಬಂದರಿನಲ್ಲಿ ಮತ್ತೆ ಗುಂಡಿನ ಕಾಳಗ
ಲಿಯೋಫೋಲ್ಡ್ವಿಲ್, ಮಾ. 5- ಸ್ವಲ್ಪ ಕದನ ವಿರಾಮದ ನಂತರ ಮಟಾಡಿ ಬಂದರಿನಲ್ಲಿ ಇಂದು ಮತ್ತೆ ಗುಂಡಿನ ಕಾಳಗ ಪ್ರಾರಂಭವಾಯಿತು.
ವಿಶ್ವಸಂಸ್ಥೆ ಪಡೆಗೆ ಸೇರಿದ ಸೂಡಾನ್ ಸೈನಿಕರು ಕಳೆದ 24 ಗಂಟೆಗಳಿಂದ ಕಾಂಗೋಲಿಗಳ ವಿರುದ್ಧ ಆಗಿಂದಾಗ್ಗೆ ಕದನ ನಡೆಸುತ್ತಿದ್ದಾರೆಂದೂ ಇಲ್ಲಿಗೆ ಬಂದ ವರದಿಗಳು ತಿಳಿಸುತ್ತದೆ. ಸೂಡಾನಿನ ಒಬ್ಬ ಅಧಿಕಾರಿಗೂ ಇಬ್ಬರು ಸೈನಿಕರಿಗೂ ತೀವ್ರ ಗಾಯಗಳಾಗಿರುವುದಾಗಿಯೂ ನಾಲ್ವರು ಸೈನಿಕರಿಗೆ ಅಲ್ಪ ಗಾಯಗಳಾಗಿರುವುದಾಗಿಯೂ ವರದಿಯಾಗಿದೆ.
ದಿನಬಳಕೆ ವಸ್ತುಗಳಲ್ಲಿ ಲಾಭಕೋರತನ
ನವದೆಹಲಿ, ಮಾ. 5- ಕೇಂದ್ರ ಆಯವ್ಯಯದ ಮಂಡನೆಯ ನಂತರ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿರುವುದರ ಬಗ್ಗೆ ಕೇಂದ್ರ ಸರ್ಕಾರಿ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಹೊಸ ತೆರಿಗೆಗಳ ಪರಿಣಾಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಈ ಅಲ್ಪಾವಧಿಯಲ್ಲಿ ಸಾಮಾನ್ಯ ಪ್ರಜೆಗೆ ನಷ್ಟವಾಗುವಂತೆ ಲಾಭಕೋರತನವು ನಡೆದಿರುವುದಾಗಿ ಈ ಮೂಲಗಳು ತಿಳಿಸಿವೆ.
ನಾಗಾ ದೌರ್ಜನ್ಯಕಾರರ ಮೇಲೆ ಕಾರ್ಯಾಚರಣೆ
ಇಂಫಾಲ್, ಮಾ. 5- ಮಣಿಪುರದ ತಾಮೆಂಗ್ ಲಾಂಗ್ ಸಬ್ ಡಿವಿಜನ್ನಲ್ಲಿ ನಾಗಾ ದೌರ್ಜನ್ಯಕಾರರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದು, ಸೈನ್ಯದ ತಂಡಗಳು ಅವರ ಮೇಲೆ ಕಾರ್ಯಾಚರಣೆ ನಡೆಸುತ್ತಿವೆಯೆಂದು ಇಂದು ಇಲ್ಲಿ ತಿಳಿದುಬಂದಿದೆ.
ಆಟೊಮೊಬೈಲ್ ಮಹತ್ವ ಒಡೆಯರ್ ಪ್ರಶಂಸೆ
ಮೈಸೂರು, ಮಾ. 5- ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಆಟೊಮೊಬೈಲ್ ಕೈಗಾರಿಕೆಯ ಮಹತ್ವವನ್ನು ಮೈಸೂರು ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ ಅವರು ಇಂದು ಇಲ್ಲಿ ಒತ್ತಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.