ಭಾವಗೀತೆಗಳ ಸೊಗಡಿಗೆ ಕಂಟಕ

ಬೆಂಗಳೂರು: ‘ಸುಗಮ ಸಂಗೀತಕ್ಕೆ ಒಂದು ಪ್ರತ್ಯೇಕ ಸ್ಥಾನ ದೊರೆಯಬೇಕು. ಸುಗಮ ಸಂಗೀತದ ಬೆಳವಣಿಗೆಗೆ ಸರ್ಕಾರ ಅಕಾಡೆಮಿಯನ್ನು ಸ್ಥಾಪಿಸಬೇಕು’ ಎಂದು 11 ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಾಧ್ಯಕ್ಷೆ ಹಾಗೂ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಒತ್ತಾಯಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗೀತೋತ್ಸವ–2014’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದು ದೃಶ್ಯ ಮಾಧ್ಯಮಗಳು, ಸಿನಿಮಾ ಹಾಡುಗಳು, ರಿಯಾಲಿಟಿ ಶೋಗಳ ಅಬ್ಬರ ಜಾಸ್ತಿಯಾಗಿ ಭಾವಗೀತೆ ತನ್ನತನವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಸುಗಮ ಸಂಗೀತದ ಪ್ರಸಾರ ವ್ಯಾಪ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಭಾವಗೀತೆಗಳ ಇಂಪು–ಸೊಂಪು, ಸೊಗಡು, ಸೊಗಸು ಎಲ್ಲಾ ಮರೆಯಾಗುತ್ತಿದೆ’ ಎಂದು ವಿಷಾದಿಸಿದರು.
‘ಕಾಲದಿಂದ ಕಾಲಕ್ಕೆ ಕಲೆಯ ಸ್ವರೂಪ ಬದಲಾಗುತ್ತಲೇ ಇದೆ. ಈಗ ಸಾಹಿತ್ಯ ಪ್ರಧಾನವಾದ ಸಂಗೀತ ಮೆಚ್ಚುಗೆಯನ್ನು ಪಡೆಯುತ್ತಿದೆ. ನಾದ ಸಿದ್ಧಿಗೆ ಸಾಹಿತ್ಯಾಂಶದ ಅವಶ್ಯಕತೆಯಿಲ್ಲ ಎಂಬುದು ನಿಜವಾದರೂ, ಸಂಗೀತ ಮನದಾಳಕ್ಕಿಳಿಯಲು ಸಾಹಿತ್ಯದ ಸಖ್ಯ ಬೇಕು. ಇದೇ ಸಂಗೀತ ಮತ್ತು ಸಾಹಿತ್ಯಕ್ಕೆ ಇರುವ ಅವಿನಾಭಾವ ಸಂಬಂಧವನ್ನು ಸಾದರಪಡಿಸುತ್ತದೆ’ ಎಂದು ಹೇಳಿದರು.
ಲೇಖಕಿ ವೈದೇಹಿ ಮಾತನಾಡಿ, ‘ರಾಜ್ಯದಲ್ಲಿ ಸುಗಮ ಸಂಗೀತ ಕ್ಷೇತ್ರವನ್ನು ಮುನ್ನಡೆಸಿದವರಲ್ಲಿ ಗಾಯಕಿಯರ ಪಾತ್ರವೂ ಇದೆ. ಸುಗಮ ಸಂಗೀತ ಪರಿಷತ್ತು ಮಹಿಳಾ ಕವಿಗಳ ಹಾಡುಗಳನ್ನೂ ಜನಪ್ರಿಯಗೊಳಿಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಚೆನ್ನವೀರ ಕಣವಿ, ಗಾಯಕಿ ಅನುರಾಧಾ ಧಾರೇಶ್ವರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.