ಮಲೆನಾಡಿನಲ್ಲೆಗ ಮೈ ನಡುಗುವ ಚಳಿ

ಶಿವಮೊಗ್ಗ: ಮಲೆನಾಡಿನಲ್ಲಿ ಈಗ ಗಡಗಡ ನಡುಗುವ ಚಳಿ. ಶೀತಗಾಳಿ ಸುಯ್ಯನೆ ಬೀಸುತ್ತಿರುವುದರಿಂದ ಮುಂಜಾನೆ ಹಾಗೂ ಮುಸ್ಸಂಜೆಯಲ್ಲಿ ತಾಳಲಾರದ ಚಳಿ ಕಾಣಿಸಿಕೊಂಡಿದೆ.
ಕಳೆದ ಕೆಲವು ದಿನಗಳಿಂದ ತಾಪಮಾನ ಕನಿಷ್ಠ 12ರಿಂದ 15 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಗಾಢ ಚಳಿಯಿಂದಾಗಿ ಮಲೆನಾಡಿನ ಜನಜೀವನ ಸ್ತಬ್ಧಗೊಂಡಿದೆ. ಬೆಳಿಗ್ಗೆ ಮತ್ತು ಸಂಜೆ ಜನ ಮನೆಯಿಂದ ಹೊರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಸಮಯದಲ್ಲಿ ಹೊರಗಡೆ ಜನಸಂಖ್ಯೆ ವಿರಳವಾಗಿದೆ.
ವಾಕಿಂಗ್ ಹೋಗುವವರು ನಾಪತ್ತೆ ಆಗಿದ್ದಾರೆ. ಹಾಲು, ಪೇಪರ್ಗಳು ಜನರಿಗೆ ತಡವಾಗಿ ತಲುಪುತ್ತಿವೆ. ಹಿರಿಯರು, ಮಕ್ಕಳಲ್ಲಿ ಚರ್ಮ ಸಂಬಂಧಿ ಕಾಯಿಲೆಗಳು ಉಲ್ಬಣಗೊಂಡಿವೆ.ತೀರ್ಥಹಳ್ಳಿಯ ಆಗುಂಬೆಯಲ್ಲಿ ಭಾನುವಾರ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶಿವಮೊಗ್ಗ ನಗರದಲ್ಲಿ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶನಿವಾರ ಅತಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಶುಕ್ರವಾರ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು.
ಪ್ರತಿ ಸಲ ಡಿಸೆಂಬರ್ ಅಂತ್ಯಕ್ಕೆ ಆರಂಭವಾಗುವ ಚಳಿ ಈ ಬಾರಿ ನವೆಂಬರ್ ಎರಡನೇ ವಾರದಲ್ಲೇ ಆರಂಭವಾಗಿದೆ. ಈ ವರ್ಷದಷ್ಟು ಚಳಿ ಹಿಂದೆ ಇರಲಿಲ್ಲ ಎನ್ನುತ್ತಾರೆ ನಿತ್ಯ ವಾಕಿಂಗ್ ಮಾಡುವ ಸದಾಶಿವ ಶೆಣೈ.ಉತ್ತರದಿಂದ ಬೀಸುತ್ತಿರುವ ಈ ಶೀತಗಾಳಿ ಈ ತಿಂಗಳ ಅಂತ್ಯದವರೆಗೂ ಇರಲಿದೆ. ಮುಂದಿನ 48 ಗಂಟೆಗಳವರೆಗೂ ಒಣಹವೆ ಮುಂದುವರಿಯಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಮುಂಜಾನೆ ಮತ್ತು ಮುಸ್ಸಂಜೆ ವೇಳೆಯಲ್ಲಿ ಚಳಿ ಇದ್ದು, ಮಧ್ಯಾಹ್ನ ಚೆನ್ನಾಗಿ ಬಿಸಿಲು ಇರುವುದರಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೀವ್ರ ಚಳಿ ಇದೇ ರೀತಿ ಮುಂದುವರಿದರೆ ಬೆಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು.
ತೀವ್ರ ಚಳಿಯಿಂದಾಗಿ ಜಾನವಾರುಗಳಲ್ಲಿ ಹಾಲಿನ ಉತ್ಪಾಧನೆ ಕಡಿಮೆಯಾಗಿದೆ. ಚಳಿ ಇದೇ ರೀತಿ ಮುಂದುವರಿದರೆ ಹಾಲಿನ ಉತ್ಪಾದನೆ ಇನ್ನಷ್ಟು ಕುಂಠಿತಗೊಳ್ಳಲಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.