ಮಳೆಗಾಗಿ ಮುಸ್ಲಿಂ ಸಮುದಾಯದ ಪ್ರಾರ್ಥನೆ
ತುಮಕೂರು: ಮಳೆಗಾಗಿ ಪ್ರಾರ್ಥಿಸಿ ನಗರದ ಅಮಾನಿಕೆರೆಯಲ್ಲಿ ಮುಸ್ಲಿಂ ಸಮಾಜದಿಂದ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಗರದ ಸುಮಾರು 72 ಮಸೀದಿಗಳ ನೂರಾರು ಪ್ರತಿನಿಧಿಗಳು ಕೆರೆ ಅಂಗಳದಲ್ಲಿ ಸಮಾವೇಶಗೊಂಡು ಅರ್ಧ ಗಂಟೆ ಕಾಲ ಪ್ರಾರ್ಥನೆ ಸಲ್ಲಿಸಿ, ಮಳೆಗಾಗಿ ಕುರಾನ್ ಪಠಿಸಿದರು. ಪ್ರಕೃತಿ ವಿಕೋಪದಿಂದ ತಮ್ಮನ್ನು ರಕ್ಷಿಸು ಎಂದು ಅಲ್ಲಾನಲ್ಲಿ ಬೇಡಿಕೆ ಸಲ್ಲಿಸಿದರು.
ಎಲ್ಲಿಯಾದರೂ ಬರ, ಕ್ಷಾಮ, ನೆರೆ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದರೆ ಮುಸ್ಲಿಂ ಸಮುದಾಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ತಮ್ಮನ್ನು ಕಾಪಾಡುವಂತೆ ಮೊರೆ ಇಡುವುದು ಮೊದಲಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಮಹಮದ್ ಪೈಗಂಬರ್ ಇದನ್ನು ತಮ್ಮ ಶಿಷ್ಯರಿಗೆ ಬೋಧಿಸಿದ್ದಾರೆ.
ಇದು ಪ್ರಪಂಚದ ಎಲ್ಲೆಡೆ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಪ್ರಾರ್ಥನೆ ನಂತರ ಮುಸ್ಲಿಂ ಮುಖಂಡರು ತಿಳಿಸಿದರು.
8 ವರ್ಷಗಳ ಹಿಂದೆ ರಾಜ್ಯದಲ್ಲಿ ಇದೇ ರೀತಿ ಬರದ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಅಮಾನಿಕೆರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿತ್ತು. ಮಳೆಗಾಗಿ ಕೆರೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯ. ಈ ಸಂದರ್ಭದಲ್ಲಿ ತಮ್ಮ ತಪ್ಪುಗಳನ್ನೆಲ್ಲಾ ಕ್ಷಮಿಸಿ, ಕರುಣೆ ತೋರಿ ಮಳೆ ಸುರಿಸುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಮೀಯ ಮಸೀದಿ ಮೌಲಾನ್ ಇಸ್ಲಾವುದ್ದೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫೀಅಹ್ಮದ್, ಸಂತೇಪೇಟೆ ಮಸೀದಿ ಕಾರ್ಯದರ್ಶಿ ನಯಾಜ್ಅಹ್ಮದ್, ನಗರಸಭೆ ಸದಸ್ಯ ಮೆಹಬೂಬ್ಅಹ್ಮದ್, ಮುಖಂಡ ರಫೀಕ್ ಅಹ್ಮದ್ ಮುಂತಾದವರು ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.