ಮಾಯದ ರಕ್ಕಸ

ನಂಜನಗೂಡಿನ ಹೆಗ್ಗಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಪದ್ಯ ಕಟ್ಟುವ ಒಂದು ಆಟ ನಡೆಯಿತು. ನಾಟಕದ ಮೇಷ್ಟ್ರು ಸಂತೋಷ ಗುಡ್ಡಿಯಂಗಡಿ ಅವರು ಹೇಳಿದ ‘ಮಾಯದ ರಕ್ಕಸ’ ಕಥೆಯನ್ನು ಶಾಲೆಯ ಎಂಟನೇ ತರಗತಿ ಮಕ್ಕಳು ಪದ್ಯವಾಗಿ ಮಾರ್ಪಾಡು ಮಾಡಿದರು. ಮಕ್ಕಳು ಒಬ್ಬೊಬ್ಬರು ಒಂದೊಂದು ಸಾಲು ಹೇಳಿ ರಚನೆಯಾದ ಈ ಪದ್ಯ ಎಷ್ಟೊಂದು ಸೊಗಸಾಗಿದೆ ಹಾಗೂ ಇತರ ಶಾಲೆಯ ಮಕ್ಕಳೂ ‘ಪದ್ಯದ ಆಟ’ ಆಡಲು ಪ್ರೇರಣೆ ನೀಡುವಂತಿದೆ.
ಬಂದರು ಮಕ್ಕಳು ಅಜ್ಜಿಯ ಮನೆಗೆ
ಕುಳಿತರು ಮಕ್ಕಳು ಅಜ್ಜಿಯ ಜೊತೆಗೆ
ಅಜ್ಜಿ ಅಜ್ಜಿ ಕತೆ ಹೇಳು
ಮಾಯದ ರಕ್ಕಸ ಕತೆ ಹೇಳು
ಹೇಳುವೆ ಕೇಳಿ ಕತೆಯನ್ನು
ಮಾಯದ ರಕ್ಕಸ ಕತೆಯನ್ನು
ಒಂದಾನೊಂದು ಕಾಡಿತ್ತು
ಕಾಡಲಿ ಒಂದು ಗುಹೆ ಇತ್ತು
ರಕ್ಕಸ ಗುಹೆಯಲಿ ಮಲಗಿದ್ದ
ಗೊರ ಗೊರ ಗೊರಕೆ ಹೊಡಿತಿದ್ದ
ಗುಹೆ ಬಳಿ ಚಿನ್ನದ ಮರವಿತ್ತು
ಫಳ ಫಳ ಫಳ ಫಳ ಹೊಳಿತಿತ್ತು
ಮೆಲ್ಲಗೆ ಬಂದನು ಮಾನವನು
ಗುಹೆಯ ಒಳಗಡೆ ನೋಡಿದನು
ಗೊರ ಗೊರ ಗೊರಕೆ ಕೇಳಿಸಿತು
ನಿದ್ದೆಯು ಜೋರು ನಡೆದಿತ್ತು
ಮಾನವ ತೆಗೆದನು ಗರಗಸವ
ಕರಕರ ಕೊಯ್ದನು ಚಿನ್ನದ ಮರವ
ಸದ್ದದು ಕೇಳಿತು ರಕ್ಕಸಗೆ
ಗೊರಕೆಯು ನಿಂತಿತು ಒಳಗಡೆಗೆ
ರೋಷದಿ ಬಂದನು ದಬದಬನೆ
ಮಾನವ ನಡುಗಿದ ಗಡಗಡನೆ
ಹಿಡಿದನು ನಡುಗುವ ಮಾನವನ
ಬಡಿದನು ರಕ್ಕಸ ಅವನನ್ನ
ಚಿನ್ನದ ಮರವನು ಕಡಿಯುವೆಯಾ?
ಕಾಡನು ನಾಶ ಮಾಡುವೆಯಾ?
ಕಾಡನು ಕಡಿದರೆ ಮಳೆಯಿಲ್ಲ
ಮಳೆಯಿಲ್ಲದೆಯೇ ಬೆಳೆಯಿಲ್ಲ
ಚಿನ್ನದ ಮರವು ಮರೆಯಾಯ್ತು
ಅಜ್ಜಿಯ ಕತೆಯು ಮುಗಿದೋಯ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.