ಮಾರನ್ ಸೋದರರ ಸ್ತಿರಾಸ್ತಿಗಳ ಮೇಲೆ ಸಿಬಿಐ ದಾಳಿ
ಚೆನ್ನೈ / ನವದೆಹಲಿ/ಹೈದರಾಬಾದ್ (ಪಿಟಿಐ/ಐಎಎನ್ಎಸ್): ವಿವಾದಿತ 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿದೆ.
ವಿವಾದಿತ ಏರ್ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿದ ನಂತರ ಈ ದಾಳಿ ನಡೆಸಲಾಗಿದೆ.
ಇದಲ್ಲದೇ ಸಿಬಿಐ, ಸನ್ ಟಿವಿ ಸಮೂಹದ ಪ್ರವರ್ತಕರಾದ ಮಾರನ್ ಅವರ ಸಹೋದರ ಕಲಾನಿಧಿ ಮಾರನ್ ಸೇರಿದಂತೆ, ಮಲೇಶಿಯಾ ಮೂಲದ ಮ್ಯಾಕ್ಸಿಸ್ ಕಂಪನಿ ಮಾಲೀಕ ಟಿ.ಆನಂದ ಕೃಷ್ಣನ್, ಹಿರಿಯ ಅಧಿಕಾರಿ ರಾಲ್ಪ ಮಾರ್ಷಲ್ ಹಾಗೂ ಮ್ಯಾಕ್ಸಿಸ್, ಆಸ್ಪರೊ ಮತ್ತು ಸನ್ ಟಿವಿ ಕಂಪೆನಿಗಳ ಮೇಲೆ ಸಂಚು ನಡೆಸಿದ ಅಪರಾಧಕ್ಕಾಗಿ ಭ್ರಷ್ಟಾಚಾರ ತಡೆ ಕಾನೂನಿನ ಅಡಿ ಪ್ರಕರಣ ದಾಖಲಿಸಿದೆ.
ಪ್ರಕರಣ ದಾಖಲಿಸಿಕೊಂಡ ನಂತರ ಮಾರನ್ ಸಹೋದರರ ಚೆನ್ನೈ ಮತ್ತು ದೆಹಲಿಯಲ್ಲಿರುವ ಮನೆಗಳು ಹಾಗೂ ಸನ್ ಟಿವಿ ಕಚೇರಿಗಳ ಮೇಲೂ ಸಿಬಿಐ ದಾಳಿ ನಡೆಸಿದೆ.
ಅಪೋಲೋ ಸಮೂಹದ ಅಸ್ಪತ್ರೆಗಳ ಸಮೂಹದ ಸ್ಥಾಪಕ ಪ್ರತಾಪ್ ರೆಡ್ಡಿ ಅವರ ಮಗಳಾದ ಸುನಿತಾ ರೆಡ್ಡಿ ಅವರ ಹೈದರಾಬಾದ್ ಮತ್ತು ಚೆನ್ನೈ ಮನೆಗಳ ಮೇಲೆಯೂ ದಾಳಿ ನಡೆಸಲಾಗಿದೆ. ಕಳೆದ 2005ರಲ್ಲಿ ಸುನಿತಾ ರೆಡ್ಡಿ ಏರ್ ಸೆಲ್ ಕಂಪೆನಿಯ ಅಧ್ಯಕ್ಷೆಯಾಗಿದ್ದಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.