ಮುಂದುವರಿದ ಅಗ್ನಿಯ ರೌದ್ರಾವತಾರ.ಮೂರು ಹಳ್ಳಿಗಳಲ್ಲಿ ಗುಡಿಸಲು ಭಸ್ಮ
ಹಿರಿಯೂರು: ತಾಲ್ಲೂಕಿನಲ್ಲಿ ಅಗ್ನಿಯ ರೌದ್ರಾವತಾರ ಮುಂದುವರಿದಿದೆ. ಬೆಳಗಟ್ಟ, ಹೊಸೂರು, ಮಲ್ಲಪ್ಪನಹಳ್ಳಿ, ಗೌನಹಳ್ಳಿಗಳಲ್ಲಿ ಗುಡಿಸಲು ಹಾಗೂ ತೋಟಗಳಿಗೆ ಬುಧವಾರ ಸಂಜೆ ಹಾಗೂ ಗುರುವಾರ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಬಳಗಟ್ಟ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಜ್ಜಲ್ ಕರಿಯಪ್ಪ, ಮಂಜುನಾಥ, ಸಜ್ಜಲ್ ತಿಮ್ಮಯ್ಯ ಎನ್ನುವವರ ಗುಡಿಸಲುಗಳಿಗೆ ಬೆಂಕಿ ಬಿದ್ದ ಪರಿಣಾಮ 15 ಚೀಲ ರಾಗಿ, ಎರಡು ಜತೆ ಬೆಳ್ಳಿಯ ಕಾಲುಗೆಜ್ಜೆ, ಓಲೆ ಸೇರಿದಂತೆ ನಿತ್ಯೋಪಯೋಗದ ಎಲ್ಲಾ ವಸ್ತುಗಳು ಭಸ್ಮವಾಗಿದ್ದು, ಸುಮಾರು 1 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ.
ಪರಿಹಾರ ವಿತರಣೆ: ಅನಾಹುತ ನಡೆದ ತಕ್ಷಣ ವಾಣಿ ವಿಲಾಸಪುರ ಗ್ರಾ.ಪಂ. ಅಧ್ಯಕ್ಷ ಬಸವರಾಜಪ್ಪ, ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಸಂತ್ರಸ್ತರಿಗೆ ್ಙ 2,600 ಪರಿಹಾರ ವಿತರಣೆ ಮಾಡಿದರು.ಗೌನಹಳ್ಳಿಯಲ್ಲಿ ಕರಿಯಪ್ಪ ಎಂಬ ರೈತರ ತೋಟದ ಬೇಲಿಗೆ ತಗುಲಿದ ಬೆಂಕಿಯಿಂದ ಮೂರು ತೆಂಗು ಮತ್ತು ಮೂರು ಅಡಿಕೆ ಮರಗಳು ಸುಟ್ಟಿದ್ದು, ಅಪಾರ ಪ್ರಮಾಣದ ತೋಟದ ಬೇಲಿ ನಾಶವಾಗಿದೆ. ಬೆಂಕಿ ಹತ್ತಿದ ಸುದ್ದಿ ತಿಳಿದ ತಕ್ಷಣ ನೆರವಿಗೆ ಬಂದ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.
ಹುಚ್ಚವ್ವನಹಳ್ಳಿ ಸಮೀಪದ ಹೊಸೂರಿನಲ್ಲಿ ಗುರುವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಕಾಸಿಂಸಾಬ್ ಎನ್ನುವವರ ಮನೆಯ ಮುಂಭಾಗದ ಗರಿಯ ಹೊದಿಕೆಯ ಚಪ್ಪರ ಸುಟ್ಟು ಹೋಗಿದ್ದು, ಅಂದಾಜು 5 ಸಾವಿರ ನಷ್ಟವಾಗಿದೆ.ಮಲ್ಲಪ್ಪನಹಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಮಂಡಿಗಿರಿಯಪ್ಪ ಎಂಬ ರೈತರ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ಮಾವು, ಮೋಸಂಬಿ, ಸಪೋಟ ಗಿಡಗಳು ಹಾಗೂ ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿ ಕೊಳವೆಗಳು ಸಂಪೂರ್ಣ ನಾಶವಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.