ರೈತರಿಂದ ಕರಾಳ ದಿನ ಆಚರಣೆ

ಮಂಡ್ಯ: ಕೆಆರ್ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ರೈತ ಸಂಘ ಪ್ರತ್ಯೇಕ ಬಣ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ಮಾಡಿದರು.
ರೈತ ಸಂಘದ ಪ್ರತ್ಯೇಕ ಬಣದವರು ಸಂಜಯ ವೃತ್ತದಲ್ಲಿ, ರೈತ ಸಂಘದವರು ಜಿಲ್ಲಾ ಕ್ರೀಡಾಂಗಣದ ಬಳಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು. ಕರವೇ ಕಾರ್ಯಕರ್ತರೂ ಕ್ರೀಡಾಂಗಣ ಬಳಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ಈಡೇರಿಕೆಗೆ ಆಗ್ರಹಿಸಿದರು.
ರಾಜ್ಯ ರೈತ ಸಂಘ: ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದ್ದನ್ನು ಖಂಡಿಸಿ ಸ್ವಾತಂತ್ರ್ಯ ದಿನವನ್ನು ರೈತರ ಕರಾಳ ದಿನ ಎಂದು ಆಚರಿಸಿ, ಪ್ರತಿಭಟನೆ ಮಾಡಿದರು.
ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆ ರಕ್ಷಿಸಬೇಕು. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಿ, ಕುಡಿಯುವ ನೀರಿಗಾಗಿ ನೀರನ್ನು ಸಂಗ್ರಹಿಸಬೇಕು. ಕಾವೇರಿ ಹಾಗೂ ಮಹಾದಾಯಿ ನ್ಯಾಯಮಂಡಳಿ ರದ್ದು ಪಡಿಸಿ, ನಿರಿನ ಲಭ್ಯತೆ ಆಧರಿಸಿ ನೀರು ಹಂಚಿಕೆಗೆ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಕಳಸಾ–ಬಂಡೂರಿ ನಾಲಾ ತಿರುವು ಯೋಜನೆಗೆ ಜಾರಿಗೆ ಪ್ರಧಾನಮಂತ್ರಿ ಅವರು ಸಂಬಂಧಿಸಿದ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ಮಹಾದಾಯಿ ಹೋರಾಟಗಾರರ ಮೇಲೆ ಹಾಕಿರುವು ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮೈಷುಗರ್ ಹಾಗೂ ಜಿಲ್ಲೆಯ ಇತರೆ ಕಾರ್ಖಾನೆ ಆರಂಭಿಸಬೇಕು. ಪ್ರತಿ ಟನ್ ಕಬ್ಬಿಗೆ ₹ 3 ಸಾವಿರ ಮುಂಗಡ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕೋಣಸಾಲೆ ನರಸರಾಜು, ಶಂಭೂನಹಳ್ಳಿ ಸುರೇಶ್, ಜಿ.ಎಸ್.ಲಿಂಗಪ್ಪಾಜಿ, ಮರಿಲಿಂಗೇಗೌಡ, ಹನಿಯಂಬಾಡಿ ನಾಗರಾಜು, ಬೊಮ್ಮೇಗೌಡ, ಹಲ್ಲೆಗೆರೆ ಶಿವರಾಮು, ಅಣ್ಣೂರು ಮಹೇಂದ್ರ ಇದ್ದರು.
ರೈತ ಸಂಘ ಪ್ರತ್ಯೇಕ ಬಣ: ಕಟ್ಟು ಪದ್ಧತಿ ಕೈಬಿಟ್ಟು ನಿರಂತರ ನೀರು ಹರಿಸಬೇಕು. ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಭತ್ತ ಬೆಳೆಯಬೇಡಿ ಎನ್ನುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಮೈಷುಗರ್ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಹೇಮಾವತಿ ನಾಲೆಯಿಂದ ಕೆರೆ ತುಂಬಿಸಬೇಕು. ತಾಲ್ಲೂಕು ಕೇಂದ್ರಗಳಲ್ಲಿ ತೆಂಗು ಹಾಗೂ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಬೇಕು. ಹಾಲಿನ ಪ್ರೋತ್ಸಾಹ ಧನ ಕೂಡಲೇ ವಿತರಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಬೋರಾಪುರ ಶಂಕರೇಗೌಡ, ಸುಧೀರಕುಮಾರ್ ಪಾಲ್ಗೊಂಡಿದ್ದರು.
ಕರವೇ: ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆ ಯಬೇಕು. ಮೈಷುಗರ್ ಕಂಪೆನಿಗೆ ಮಹದೇವು ಅವರನ್ನು ಮತ್ತೆ ಎಂ.ಡಿ. ಯಾಗಿ ನೇಮಕ ಮಾಡಬೇಕು. ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಆಗ್ರಹಿಸಿದರು.ಎಲ್ಲ ಕೆರೆಗಳ ಹೂಳು ತೆಗೆಸಬೇಕು. ಮರಳು ದೊರೆಯದೇ ಜನರು ತೀವ್ರ ತೊಂದರೆ ಎದುರಿಸು ತ್ತಿದ್ದು, ಮರಳು ಸಿಗುವಂತೆ ಕ್ರಮಕೈ ಗೊಳ್ಳಬೇಕು. ಸರ್ಕಾರಿ ಆಸ್ತಿ ಒತ್ತುವರಿ ಮಾಡಿರುವ ಬಗ್ಗೆ ಸರ್ವೆ ನಡೆಸಿ, ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಚ್.ಡಿ. ಜಯರಾಮು, ಎಂ.ಎಲ್.ಗಿರೀಶ್, ಪಿ.ಎ.ಜೋಸೆಫ್ ಪಾಲ್ಗೊಂಡಿದ್ದರು.
ಉಪವಾಸ
ಮದ್ದೂರು: ಕೆಆರ್ಎಸ್ ಜಲಾಶಯ ದಿಂದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮದ್ದೂರು ಸಮೀಪದ ಐತಿಹಾಸಿಕ ಶಿವಪುರ ಧ್ವಜಸತ್ಯಾಗ್ರಹ ಸೌಧದ ಎದುರು ಸೋಮವಾರ ಕರ್ನಾಟಕ ರಾಜ್ಯ ತೆಂಗುಬೆಳೆಗಾರರ ಸಂಘದ ವತಿಯಿಂದ ಒಂದು ದಿನದ ಸಾಂಕೇತಿಕ ಉಪವಾಸ ಧರಣಿ ನಡೆಯಿತು.ಮರಕಾಡುದೊಡ್ಡಿ ಗ್ರಾಮದ ಎಂ. ತಮ್ಮಣ್ಣಗೌಡ ಗಾಂಧೀ ವೇಷಧಾರಿ ಯಾಗಿ ಧರಣಿಯಲ್ಲಿ ಗಮನಸೆಳೆದರು.
ತೆಂಗು ಬೆಳೆಗಾರರ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ಒಂದು ಬೆಳೆಗೆ ನೀರು ಕೊಡುತ್ತೇವೆ ಎಂದು ಜಿಲ್ಲಾಡಳಿತ ನೀಡಿದ ಆಶ್ವಾಸನೆ ನಂಬಿ ಈಗಾಗಲೇ ಭತ್ತದ ನಾಟಿ ಸಸಿ ಮಡಿ ಸಿದ್ಧಪಡಿಸಿದ್ದೇವೆ. ಆದರೆ, ಇದೀಗ ನೀರು ನೀಡಲು ಸಾಧ್ಯವಿಲ್ಲ ಎಂದು ನೀರಾವರಿ ಇಲಾಖೆ ತಿಳಿಸಿರುವುದು ರೈತರಿಗೆ ಆಘಾತವುಂಟುಮಾಡಿದೆ. ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಿ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಮಂಜೇಗೌಡ ಧರಣಿ ನಿರತರನ್ನು ಸಮಾಧಾನಪಡಿಸಿದರು. ಇಂದು ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಇದೆ. ಸಭೆಯಲ್ಲಿ ಆಗುವ ತೀರ್ಮಾನ ನೋಡಿಕೊಂಡು ಮುಂದಿನ ನಿರ್ಧಾರ ತೆಗದುಕೊಳ್ಳಿ. ಸದ್ಯ ಈ ಧರಣಿಯನ್ನು ಕೈಬಿಡಿ ಎಂದು ಮನವಿ ಮಾಡಿದ ಬಳಿಕ ಧರಣಿ ಹಿಂಪಡೆಯಲಾಯಿತು.
ರೈತ ಮುಖಂಡರಾದ ಶಿವಣ್ಣ, ಚೇತನ್, ರಾಮಕೃಷ್ಣ, ಕೆಂಪೇಗೌಡ, ಸುರೇಶ್, ಗೊರವನಹಳ್ಳಿ ರಾಘವಾ, ಕುಮಾರ, ಮಹೇಶ್, ಬೋರೇಗೌಡ ಸೇರಿದಂತೆ ಚನ್ನಸಂದ್ರ, ಮರಕಾಡ ದೊಡ್ಡಿ, ಗೊರವನಹಳ್ಳಿ, ಸೋಂಪುರ, ನಗರಕೆರೆ ಗ್ರಾಮಸ್ಥರು ಧರಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಪ್ಪುಪಟ್ಟಿ ಕಟ್ಟಿ ಧರಣಿ
ಶ್ರೀರಂಗಪಟ್ಟಣ: ರಾಜ್ಯ ಸಚಿವ ಸಂಪುಟ ಕೆಆರ್ಎಸ್ ಜಲಾಶಯದಿಂದ ಕೃಷಿಗೆ ನೀರು ಹರಿಸುವುದಿಲ್ಲ ಎಂಬ ನಿರ್ಣಯ ಕೈಗೊಂಡಿರುವುದನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಕರಾಳ ದಿನ ಆಚರಿಸಿದರು.
ಇಲ್ಲಿನ ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದ ಬಳಿಯ ಕುವೆಂಪು ಪ್ರತಿಮೆ ಬಳಿ ಕಪ್ಪುಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.