ಲೆಕ್ಕ ಪರಿಶೋಧಕರ ಸಮ್ಮೇಳನ ಇಂದಿನಿಂದ
ಹುಬ್ಬಳ್ಳಿ: ಲೆಕ್ಕ ಪರಿಶೋಧಕರ ಹುಬ್ಬಳ್ಳಿ ಶಾಖೆಯ 26ನೇ ವಾರ್ಷಿಕ ಸಮ್ಮೇಳನ ಹಾಗೂ ರಾಜ್ಯದ ಎಲ್ಲ ಶಾಖೆಗಳ ಸಹಭಾಗಿತದಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಇದೇ 22 ಹಾಗೂ 23ರಂದು ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ ಸಭಾಂಗಣದಲ್ಲಿ ನಡೆಯಲಿದೆ.
`ಸಿ.ಎ ವೃತ್ತಿಯಲ್ಲಿನ ಬೆಳವಣಿಗೆ ಹಾಗೂ ಸವಾಲುಗಳನ್ನು ಅರಿಯುವ ಸಲುವಾಗಿ ಜ್ಞಾನ ದಾಸೋಹವನ್ನು ಉಣಬಡಿಸಲಾಗುತ್ತದೆ. ಇದನ್ನೇ ಸಮ್ಮೇಳನದ ಶೀರ್ಷಿಕೆಯಾಗಿ ಇಡಲಾಗಿದೆ. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು ಹಾಗೂ ಉಡುಪಿಯ ಏಳು ಸಂಸ್ಥೆಗಳು ಕೂಡಿಕೊಂಡು ರಾಜ್ಯ ಸಮ್ಮೇಳನವನ್ನು ಸಂಘಟಿಸಿವೆ.
ಬೆಂಗಳೂರಿನ ನಂತರ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಸಮ್ಮೇಳನ ನಡೆಯಲಿದೆ. ಸುಮಾರು 600 ಪ್ರತಿನಿಧಿಗಳು ಭಾಗವಹಿಸುವರು~ ಎಂದು ಐಸಿಎಐ (ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ) ಹುಬ್ಬಳ್ಳಿ ಶಾಖೆ ಅಧ್ಯಕ್ಷ ಸುರೇಶ ಚೆನ್ನಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`22ರಂದು ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆಯುವ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಗೌರವಾನ್ವಿತ ಅತಿಥಿಗಳಾಗಿ ಕೆಎಲ್ಇ ಸೊಸೈಟಿ ಅಧ್ಯಕ್ಷ ಡಾ.ಪ್ರಭಾಕರ ಕೋರೆ, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಎಸ್ಬಿಐ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ.ಎಂ. ತ್ರಿವೇದಿ, ಕೆವಿಜಿ ಬ್ಯಾಂಕಿನ ಅಧ್ಯಕ್ಷ ಸಿ. ಸಾಂಬಶಿವ ರೆಡ್ಡಿ ಭಾಗವಹಿಸುವರು.
ಉದ್ಘಾಟನೆ ನಂತರ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಕಂಪೆನಿಯ ಅಂಕಿ ಸಂಖ್ಯೆಗಳನ್ನು ಷೇರುದಾರರು ಅಭ್ಯಸಿಸಲು ಅನುಕೂಲವಾಗುವುದಕ್ಕಾಗಿ ಷೆಡ್ಯೂಲ್ 6ರಲ್ಲಿ ಬಹಳಷು ಬದಲಾವಣೆ ಆಗಿರುತ್ತದೆ.
ಬದಲಾವಣೆಗಳನ್ನು ಸಿ.ಎ (ಲೆಕ್ಕ ಪರಿಶೋಧಕರು) ಹಾಗೂ ಆಸಕ್ತರಿಗೆ ಮೋಹನ ಲಾವಿ ಮಾತನಾಡುವರು. ಈಚೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಳ್ಳುತ್ತಿರುವ ಕುರಿತು ಚೆನ್ನೈನ ಎಸ್. ಗುರುಮೂರ್ತಿ ಬೆಳಕು ಚೆಲ್ಲುತ್ತಾರೆ. ಸೇವಾ ತೆರಿಗೆ ಕಾನೂನಿನಲ್ಲಿ ನೆಗೆಟಿವ್ ಲಿಸ್ಟ್ ಜಾರಿಗೆ ಬಂದಿರುವ ಕುರಿತು ಬೆಂಗಳೂರಿನ ಸಾಯಿಪ್ರಸಾದ ಮಾತನಾಡುವರು~ ಎಂದರು.
`23ರಂದು ಬೆಳಿಗ್ಗೆ 8.30 ಗಂಟೆಗೆ ಒತ್ತಡ ನಿರ್ವಹಣೆ ಕುರಿತು ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಪ್ರವಚನ ನೀಡುವರು. ನಂತರ ಲೆಕ್ಕ ಪರಿಶೋಧಕರ ಹಾಗೂ ಮಾಹಿತಿ ತಂತ್ರಜ್ಞಾನ ಕುರಿತು ಎ. ರಫೀಕ್ ಉಪನ್ಯಾಸ ನೀಡುವರು. ಟ್ರಸ್ಟ್ ಹಾಗೂ ಎನ್ಪಿಒಗಳ ಆದಾಯ ತೆರಿಗೆಗೆ ಸಂಬಂಧಿಸಿ ಆದಾಯ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸದಾದ ಸಿಬಿಡಿಟಿ ಸರ್ಕ್ಯುಲರ್ಸ್ ಹಾಗೂ ಕಠಿಣ ನಿಯಮಗಳ ಕುರಿತು ಮುಂಬೈಯ ತುಷಾರ ಡಾಕ್ಟರ್ ಮಾತನಾಡುವರು. ಸಿ.ಎ ವೃತ್ತಿಯಲ್ಲಿರುವ ಹೊಸ ಅವಕಾಶಗಳನ್ನು ನವದೆಹಲಿಯ ನಂದಾ ಸಿಂಗ್ ಉಪನ್ಯಾಸ ನೀಡುವರು~ ಎಂದರು.
`ಈ ಸಮ್ಮೇಳನದಲ್ಲಿ ಮೌಲ್ಯ ವರ್ಧಿತ ತೆರಿಗೆ ಹಾಗೂ ಸೇವಾ ತೆರಿಗೆಗಳ ಕುರಿತು ಚರ್ಚೆಯನ್ನು ಏರ್ಪಡಿಸಲಾಗಿದ್ದು, ಚೈತನ್ಯ, ಎಸ್. ವೆಂಕಟರಮಣಿ, ಎಸ್. ಎನ್. ಕುಲಕರ್ಣಿ, ಎಸ್.ಬಿ. ಶೆಟ್ಟಿ, ನವೀನ ರಾಜಪುರೋಹಿತ, ಸಂತೋಷ ಲಠ್ಠೆ ಹಾಗೂ ಪವನ್ ಜೈನ ಭಾಗವಹಿಸುವರು~ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ವಿಲಾಸ ಹುದ್ದಾರ, ಇತರ ಪದಾಧಿಕಾರಿಗಳಾದ ಸುಭಾಷ ಪಾಟೀಲ, ಸಮೀರ್ ಓಸವಾಲ್, ವೈ.ಎಂ. ಖಟಾವಕರ, ಹಿತೇಶಕುಮಾರ ಮೋದಿ, ಮಧುಸೂದನ ಪಿಸ್ಸೆ ಹಾಗೂ ವಿನಯ್ ಕುಲಕರ್ಣಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.