ವಿದ್ಯುತ್ ಶಾರ್ಟ್ ಸರ್ಕೀಟ್,35 ಎಕರೆ ಕಬ್ಬು ಭಸ್ಮ
ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ವೈ.ಕೆ.ಮೋಳೆಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿಗಳ ತಿಕ್ಕಾಟದಿಂದ ಉಂಟಾದ ಶಾರ್ಟ್ ಸರ್ಕೀಟ್ನಿಂದ 35 ಎಕರೆಗೂ ಹೆಚ್ಚು ಕಬ್ಬು ಭಸ್ಮವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
20 ಕ್ಕೂ ಅಧಿಕ ರೈತರ ಜಮೀನು ಇದ್ದು ಇವರೆಲ್ಲ ಕಬ್ಬು ಹಾಕಿದ್ದರು. ಕಟಾವಿಗೆ ಬಂದಿದ್ದ ಕಬ್ಬಿಗೆ ಮಧ್ಯಾಹ್ನ 12.30ರ ವೇಳೆಗೆ ಬೆಂಕಿ ಬಿದ್ದಿದೆ. ಗಾಳಿಯೂ ಹೆಚ್ಚಾಗಿದ್ದರಿಂದ ಅಕ್ಕ-ಪಕ್ಕದಲ್ಲೇ ಇದ್ದ ಇನ್ನುಳಿದ ಕಬ್ಬಿನ ಗದ್ದೆಗಳಿಗೂ ಬೆಂಕಿ ವ್ಯಾಪಿಸಿತು.
ಸಂಜೀವಮ್ಮ ದುಂಡು ಮಾದಶೆಟ್ಟಿ ಅವರ ಗದ್ದೆಯಲ್ಲಿದ್ದ ಗಾಡಿಗೆ ಎತ್ತುಗಳನ್ನು ಕಟ್ಟಲಾಗಿತ್ತು ಈ ಅವಘಡದಲ್ಲಿ ಎರಡು ಎತ್ತಿನ ಕಾಲು, ದೇಹ ಸುಟ್ಟಿದ್ದು, ಕಟ್ಟಿದ್ದ ಹಗ್ಗ ಬಿಚ್ಚಿಕೊಂಡು ಓಡಿ ಹೋಗಿವೆ. ಗಾಡಿ ಅರ್ಧ ಸುಟ್ಟು ಹೋಗಿದೆ.
ವಿದ್ಯುತ್ ತಂತಿಗಳು ಜೋತಾಡುತ್ತಿದ್ದು ಅವುಗಳ ನಡುವೆ ಘರ್ಷಣೆ ಉಂಟಾದ್ದರಿಂದ ಈ ಅವಘಡ ಸಂಭವಿಸಿದೆ. ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗ್ರಾಮದ ಶಿವಣ್ಣ, ಮಹದೇವಸ್ವಾಮಿ, ರಂಗಶೆಟ್ಟಿ ಸೇರಿದಂತೆ ಹಲವರು ದೂರಿದ್ದಾರೆ. ಅಗ್ನಿ ಶಾಮಕದಳ ಸ್ವಲ್ಪ ಮುಂಚೆ ಬಂದಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂಬುದಾಗಿ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜಿ.ಪಂ. ಸದಸ್ಯೆ ಕೇತಮ್ಮ, ತಹಶೀಲ್ದಾರ್ ಹನುಮಂತರಾಯಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ಬಾಬು, ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ರೈತರಿಂದ ಮಾಹಿತಿ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.