ವೈಎಸ್ಆರ್ ಕಾಂಗ್ರೆಸ್ ಸಂಸದನ ಬಂಧನ

ಹೈದರಾಬಾದ್: ಕಳೆದ ನವೆಂಬರ್ನಲ್ಲಿ ಏರ್ ಇಂಡಿಯಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವೈಎಸ್ಆರ್ ಕಾಂಗ್ರೆಸ್ನ ರಾಜಂಪೇಟೆ ಕ್ಷೇತ್ರದ ಸಂಸದ ಪಿ.ಮಿಥುನ್ ರೆಡ್ಡಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯರಾತ್ರಿ ಬಂಧಿಸಲಾಗಿದೆ. ನಂತರ ಅವರನ್ನು ಕಾಳಹಸ್ತಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ, 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಮಿಥುನ್ ರೆಡ್ಡಿ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಬ್ಯಾಂಕಾಕ್ನಿಂದ ಶನಿವಾರ ಮಧ್ಯರಾತ್ರಿ 1 ಗಂಟೆಗೆ ವಿಮಾನ ಮೂಲಕ ಚೆನ್ನೈ ನಿಲ್ದಾಣ ತಲುಪುತ್ತಿದ್ದಂತೆ ವಲಸೆ ಅಧಿಕಾರಿಗಳು ಮಿಥುನ್ ರೆಡ್ಡಿ ಮತ್ತು ಅಂದಿನ ಘಟನೆಯಲ್ಲಿ ಅವರ ಜತೆಗೆ ಇದ್ದ ಮಧುಸೂಧನ್ ರೆಡ್ಡಿ ಎಂಬುವರನ್ನು ಬಂಧಿಸಿದರು.
ಏನಿದು ಪ್ರಕರಣ?: ಕಳೆದ ನ.26ರಂದು ನವದೆಹಲಿಗೆ ತೆರಳುವುದಕ್ಕಾಗಿ ಸಂಸದ ಮಿಥುನ್ ರೆಡ್ಡಿ ಮತ್ತು ಅವರ ಬೆಂಬಲಿಗರು ತಿರುಪತಿ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಆದರೆ ವಿಮಾನ ಹೊರಡುವ ಕೇವಲ 20 ರಿಂದ 25 ನಿಮಿಷ ಮುಂಚಿತವಾಗಿ ಬಂದು ಬೋರ್ಡಿಂಗ್ ಪಾಸ್ ನೀಡುವಂತೆ ಕೇಳಿದರು.
ಆದರೆ, ಡಿಜಿಸಿಎ ನಿಯಮದ ಪ್ರಕಾರ ವಿಮಾನ ಹೊರಡುವ 45 ನಿಮಿಷಗಳ ಮುಂಚಿತವಾಗಿಯೇ ಬೋರ್ಡಿಂಗ್ ಪಾಸ್ ನೀಡುವುದನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿ ಪಾಸ್ ನೀಡಲು ನಿರಾಕರಿಸಲಾಗಿದೆ. ಇದರಿಂದ ಕೋಪಗೊಂಡ ಸಂಸದ ಮತ್ತು ಅವರ ಬೆಂಬಲಿಗರು ನಿಲ್ದಾಣದ ವ್ಯವಸ್ಥಾಪಕರ ಕಚೇರಿಗೆ ನುಗ್ಗಿ ಏರ್ ಇಂಡಿಯಾ ಅಧಿಕಾರಿ ರಾಜಶೇಖರ್ ಮೇಲೆ ಹಲ್ಲೆ ಮಾಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.