ಶಂಕರ ಬಿದರಿ ಅಮಾನವೀಯ ವ್ಯಕ್ತಿ - ಮುತ್ತುಲಕ್ಷ್ಮಿ

ಬೆಂಗಳೂರು ( ಪಿಟಿಐ): ಕಾಡುಗಳ್ಳ ವೀರಪ್ಪನ್ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ ಎಸ್ಟಿಎಫ್ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದು, ಬಿದರಿ `ಮಹಿಳೆಯರ ಕುರಿತು ಗೌರವ ಇಲ್ಲದ ಅಮಾನವೀಯ ವ್ಯಕ್ತಿ~ ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಆಪಾದಿಸಿದರು.
ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ನಡೆಸಿದ ದೌರ್ಜನ್ಯ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಇದೇ ವೇಳೆ ಅವರು ಆಗ್ರಹಿಸಿದರು.
ಎಸ್ಟಿಎಫ್ನ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರವನ್ನು ಒಳಗೊಂಡಂತೆ ಅನೇಕ ರೀತಿಯ ಚಿತ್ರಹಿಂಸೆಯನ್ನು ನೀಡಿದ್ದಾರೆ. ಜೀವ ಭಯದ ಕಾರಣ ಆ ಸಮಯದಲ್ಲಿ ತಾವು ಅದನ್ನು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗವು ತನಿಖೆ ಮಾಡುತ್ತಿದ್ದ ವೇಳೆ ತಾವು ತಮಿಳುನಾಡು ಪೊಲೀಸರ ವಶದಲ್ಲಿದ್ದ ಕಾರಣ ಆಯೋಗಕ್ಕೆ ತಾವು ಹೇಳಿಕೆ ನೀಡಲು ಸಾಧ್ಯವಾಗಲಿಲ್ಲ ಎಂದು ಅವರು ತಮ್ಮ ಇದವರೆಗಿನ ಮೌನಕ್ಕೆ ಸಮರ್ಥನೆ ನೀಡಿದರು.
ಬೆಂಗಳೂರಿನ ಎಂ.ಆರ್.ರಮೇಶ ಅವರು ನಿರ್ಮಿಸುತ್ತಿರುವ ವೀರಪ್ಪನ್ ಕುರಿತಾದ ಅಟ್ಟಹಾಸ (ಕನ್ನಡ) ಹಾಗೂ ವನಯುದ್ದಂ (ತಮಿಳು) ಚಿತ್ರದ ವಿರುದ್ಧ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ತಂದಿರುವುದನ್ನು ತಿಳಿಸಿದ ಮುತ್ತುಲಕ್ಷ್ಮೀ ಅವರು `ನನ್ನ ಹಾಗೂ ಪತಿಯ ಖಾಸಗಿ ಬದುಕು ಕುರಿತು ಚಿತ್ರ ನಿರ್ಮಿಸಲು ಅವರಿಗೆ ಯಾವುದೇ ಹಕ್ಕಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ~ ಎಂದರು.
ಕೆಲ ದಿನಗಳ ಹಿಂದಷ್ಟೆ ಹೈಕೋರ್ಟ್ ಬಿದರಿ ಅವರನ್ನು ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ್ದನ್ನು ಇದೇ ವೇಳೆ ಅವರು ಸ್ವಾಗತಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.