ಸರ್ವ ರೋಗಕ್ಕೂ ಯೋಗ ಮದ್ದು

ಬಾಗಲಕೋಟೆ: ಸರ್ವ ರೋಗಗಳಿಗೂ ಯೋಗ ಮದ್ದಾಗಿದ್ದು, ಯೋಗ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಸುತ್ತದೆ, ಸದಾಕಾಲ ಉತ್ಸಾಹದಿಂದ ಇರಬಹುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಗುರುವಾರ ‘ವಿಶ್ವ ಯೋಗ ದಿನಾಚರಣೆ’ ಅಂಗವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಯೋಗಾಭ್ಯಾಸದಿಂದ ತಮ್ಮ , ತಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಜತೆಗೆ ಸದೃಢ ದೇಶವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಔಷಧಿಯಿಂದ ಗುಣಪಡಿಸಲಾಗದ ಅನೇಕ ಕಾಯಿಲೆಗಳನ್ನು ಯೋಗದಿಂದ ನಿವಾರಿಸಬಹುದಾಗಿದೆ. ಮಧುಮೇಹ, ರಕ್ತದೊತ್ತಡದಂತ ಕಾಯಿಲೆಗಳಿಗೆ ಯೋಗ ರಾಮಬಾಣವಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಇದೇ 21ರಂದು ವಿಶ್ವ ಯೋಗ ದಿನಾಚರಣೆಗೆ ಇಡೀ ದೇಶವೇ ತಯಾರಿ ನಡೆಸಿರುವಾಗ ಕೆಲವರು ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
‘ಕೆಲಸವಿಲ್ಲದ ಆಲಸಿಗಳು ಮಾತ್ರ ಯೋಗ ಮಾಡುತ್ತಾರೆ’ ಎಂಬ ಸಚಿವ ಎಚ್.ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯೋಗ ದಿನಾಚರಣೆಗೆ ಸಚಿವರು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ, ರಾಜಕೀಯಕ್ಕೆ ಯೋಗವನ್ನು ಬಳಕೆ ಮಾಡಬಾರದು ಎಂದು ಹೇಳಿದರು.
ತಮ್ಮ ಮೊಬೈಲ್ನ ವ್ಯಾಟ್ಸ್ಆ್ಯಪ್ನಲ್ಲಿ ಇದ್ದ, ಸಚಿವ ಆಂಜನೇಯ ಅವರು ಯೋಗಾಭ್ಯಾಸ ಮಾಡುತ್ತಿರುವ ಚಿತ್ರಗಳನ್ನು ಭಾಂಡಗೆ ಪ್ರದರ್ಶಿಸಿದರು.
ಜನರನ್ನು ತಪ್ಪು ದಾರಿಗೆ ಎಳೆಯುವ ರಾಜಕೀಯ ಹೇಳಿಕೆ ನೀಡುವುದನ್ನು ಸಚಿವರು ನಿಲ್ಲಿಸಬೇಕು, ಯೋಗ ದಿನಾಚರಣೆಗೆ ಬೆಂಬಲ ನೀಡಬೇಕು ಎಂದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಜಿಲ್ಲೆಯ ಸಂತರು, ಮಠಾಧೀಶರು, ಹಾಲಿ, ಮಾಜಿ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಸಾರ್ವಜನಿಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.