ಸಿ.ಡಿ ವಿವಾದ: ಅಭಿಷೇಕ್ ಸಿಂಘ್ವಿ ರಾಜೀನಾಮೆ

ನವದೆಹಲಿ (ಐಎಎನ್ಎಸ್): ಸಿಡಿ ವಿವಾದದ ಹಿನ್ನೆಲೆಯಲ್ಲಿ ಸಂಸತ್ತಿನ ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕಾಂಗ್ರೆಸ್ನ ವಕ್ತಾರ ಹುದ್ದೆಗೆ ಅಭಿಷೇಕ್ ಮನು ಸಿಂಘ್ವಿ ಸೋಮವಾರ ರಾಜೀನಾಮೆ ನೀಡಿದ್ದಾರೆ.
ಸಿಡಿ ವಿವಾದದಿಂದಾಗಿ ಮಂಗಳವಾರ ಆರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಗದ್ದಲ ಉಂಟಾಗಬಾರದು ಎಂಬ ಕಾರಣಕ್ಕೆ ತಾವು ರಾಜೀನಾಮೆ ನೀಡಿದ್ದು, ತಮ್ಮ ವಿರುದ್ಧದ ಸಿಡಿ ವಿವಾದ ಹಸಿ ಸುಳ್ಳು ಮತ್ತು ಆಧಾರರಹಿತವಾದುದು ಎಂದು ಸಿಂಘ್ವಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಾವು ಈ ವಿಚಾರವನ್ನು ತಿಳಿಸಿದ್ದು, ತಮ್ಮಿಂದ ಪಕ್ಷಕ್ಕೆ ಯಾವುದೇ ಮುಜಗರ ಉಂಟಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.ಕೆಲವು ಮುದ್ರಣ ಮತ್ತ ದೃಶ್ಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸಿಡಿಯಲ್ಲಿ ತಮ್ಮದಲ್ಲದ ಸಂಭಾಷಣೆಯನ್ನು ಧ್ವನಿಮುದ್ರಿಸಿ ವದಂತಿಗಳನ್ನು ಹರಡುತ್ತಿವೆ.
ಯಾವುದೇ ಭ್ರಷ್ಟಾಚಾರ ಅಥವಾ ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ಮಾತನಾಡಿದ್ದು ಸಿಡಿಯಲ್ಲಿ ಇಲ್ಲ. ಆದರೂ ಇದನ್ನು ಪದೇಪದೇ ಪ್ರಸಾರ ಮಾಡಲಾಗುತ್ತಿದೆ ಎಂದು ಸಿಂಘ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಭೀರ ವಿಷಯ: ಸಿಡಿ ವಿವಾದದ ಹಿನ್ನೆಲೆಯಲ್ಲಿ ಸಿಂಘ್ವಿ ಅವರು ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡಿರುವುದು ಗಂಭೀರವಾದ ವಿಚಾರವಾಗಿದ್ದು, ಸಂಸತ್ತಿನಲ್ಲಿ ಇದಕ್ಕೆ ವಿವರಣೆ ಬಯಸುತ್ತೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
ಹಿನ್ನೆಲೆ: ಸಿಂಘ್ವಿ ಅವರು ವಕೀಲೆಯ ಒಪ್ಪಿಗೆಯಿಂದ ಲೈಂಗಿಕ ಸಂಪರ್ಕ ಹೊಂದಿದ್ದರೆ ಅಥವಾ ಬೇರೆ ಯಾವುದೇ ಲಾಭ ಪಡೆದು ಅವರ ಜತೆ ಲೈಂಗಿಕ ಸಂಪರ್ಕ ಮಾಡಿದ್ದರೆ ಎಂಬುದು ತಮಗೆ ಗೊತ್ತಿದೆ ಎಂದು ದೆಹಲಿ ಮೂಲದ ವಕೀಲರೊಬ್ಬರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.ಸಿಡಿಯ ಪೂರ್ತಿ ವಿವರ ತಮಗೆ ಗೊತ್ತಿದೆ ಎಂದೂ ಹೇಳಿಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.