ಸೇನೆಯಿಂದ ಕೇದಾರನಾಥಕ್ಕೆ ಹೊಸ ಭೂ ಮಾರ್ಗ
ನವದೆಹಲಿ (ಪಿಟಿಐ): ಎಡಬಿಡದೆ ಸುರಿಯುತ್ತಿರುವ ಮಳೆ, ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಹೋಗಲು ಆಗುತ್ತಿಲ್ಲ. ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಕಾಲುದಾರಿ ಕೂಡ ಕೊಚ್ಚಿಹೋಗಿದೆ. ಇದರಿಂದ ಪರಿಹಾರ ಕಾರ್ಯ ಕುಂಠಿತವಾಗಿರುವ ಕಾರಣ ಸೇನೆಯು ಕೇದಾರಕ್ಕೆ ಹೊಸ ಭೂ ಮಾರ್ಗ ನಿರ್ಮಿಸಲು ಮುಂದಾಗಿದೆ.
`ಉತ್ತರಾಖಂಡ ಸರ್ಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ಕೇದಾರನಾಥಕ್ಕೆ ಹೊಸ ಭೂ ಮಾರ್ಗ ಕಲ್ಪಿಸುವಂತೆ ಕೋರಿವೆ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ' ಎಂದು ಸೇನಾ ಪ್ರಕಟಣೆ ಮಂಗಳವಾರ ತಿಳಿಸಿದೆ.
`ಸೇನಾ ತಂಡಗಳು ಹೊಸ ಮಾರ್ಗಕ್ಕೆ ಸ್ಥಳಾನ್ವೇಷಣೆ ನಡೆಸಿದ್ದು, ಸೋನ್ ಪ್ರಯಾಗ- ಗೋಮ್ಕಾರ್- ದೇವ ವಿಷ್ಣು- ಧುಂಗಜ್ ಗಿರಿ- ಕೇದಾರನಾಥ ಮಾರ್ಗವನ್ನು ಪ್ರಸ್ತಾವಿಸಿವೆ. ಇದು ಸುಮಾರು 20 ಕಿ.ಮೀ. ದೂರದ ಹಾದಿಯಾಗಿದ್ದು, ಸಮುದ್ರ ಮಟ್ಟದಿಮದ 13 ಸಾವಿರ ಅಡಿ ಎತ್ತರದಲ್ಲಿ ಸಾಗುತ್ತದೆ' ಎಂದು ಹೇಳಿದೆ.
ಉತ್ತರಾಖಂಡದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಹೊಸ ಮಾರ್ಗ ನಿರ್ಮಿಸದಿದ್ದರೆ ಕೇದಾರನಾಥಕ್ಕೆ ತಲುಪಲು ಆಗುವುದಿಲ್ಲ. ಆದ್ದರಿಂದ ಹೊಸ ಮಾರ್ಗ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಸೋನ್ ಪ್ರಯಾಗದಲ್ಲಿ ವಾಸುಕಿ ಗಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕಾರ್ಯವನ್ನು ಒಂದು ತಂಡ ನಡೆಸುತ್ತಿದೆ. ಈ ಸೇತುವೆ ನಿರ್ಮಾಣವಾದರೆ ಹೊಸ ಕಾಲುದಾರಿ ಸಿದ್ಧವಾಗುತ್ತದೆ ಎಂದು ಸೇನಾ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.