ಸ್ಫೂರ್ತಿ ನೀಡಿದ ಫಾಸ್ಟ್ಟ್ರ್ಯಾಕ್ ಗೈಡೆನ್ಸ್
ಗುಲ್ಬರ್ಗ: ‘ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಮತ್ತು ಗುರುಕುಲ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆಶ್ರಯದಲ್ಲಿ ನಗರದ ವಿವಿಧ ಕಾಲೇಜುಗಳ ವಾಣಿಜ್ಯ ಪಿಯು ವಿದ್ಯಾರ್ಥಿಗಳಿಗಾಗಿ ನಡೆದ ‘ಫಾಸ್ಟ್ಟ್ರ್ಯಾಕ್ ಗೈಡೆನ್ಸ್’ (ತ್ವರಿತ ಮಾರ್ಗದರ್ಶನ) ಪುನರ್ಮನನ ಶಿಬಿರದ ಸಮಾರೋಪ ಸಮಾರಂಭ ಮಂಗಳವಾರ ನಡೆಯಿತು. ಡೆಕ್ಕನ್ ಹೆರಾಲ್ಡ್ನ ಮುಖ್ಯ ವರದಿಗಾರ ಶ್ರೀನಿವಾಸ ಸಿರನೂರಕರ ಅತಿಥಿಗಳಾಗಿದ್ದರು. ಅಧ್ಯಯನದಲ್ಲಿ ಅಡಿಪಾಯ ಬಹುಮುಖ್ಯ. ಕಲಿಕೆಯಲ್ಲಿ ಮೂಲ ವಿಷಯಗಳಿಗೆ ಒತ್ತು ನೀಡಿ, ಅಡಿಪಾಯ ಗಟ್ಟಿಗೊಳಿಸಬೇಕು ಎಂದರು.
ಸಾಮಾಜಿಕ ಸಮತೋಲನಕ್ಕೆ ಕಲೆ- ವಿಜ್ಞಾನ- ವಾಣಿಜ್ಯ ವಿಷಯಗಳೆಲ್ಲವೂ ಮುಖ್ಯ. ಜಾಗತೀಕರಣದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ವಾಣಿಜ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ ವಿವರಿಸಿದರು. ಗುರುಕುಲ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀಪ್ರಸಾದ ಜಾಜಿ ಮಾತನಾಡಿ, ತರಗತಿಯಲ್ಲಿ ಯಾರು ಉತ್ತರ ನೀಡುತ್ತಾರೆ ಎಂಬುದರ ಮೇಲೆ ಕಲಿಕಾ ಸಾಮರ್ಥ್ಯ ನಿಂತಿಲ್ಲ. ವಿಷಯವನ್ನು ಆಸಕ್ತಿಯಿಂದ ಆಲಿಸಿ, ಅಂತರ್ಗತ ಮಾಡಿ ಕೊಳ್ಳುವುದರಲ್ಲಿ ಇದೆ. ಕುರುಡು ಅನುಸರಣೆ ಬೇಡ. ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಎಂದರು.ಕಾಲೇಜಿನಲ್ಲಿ ನೀಡಲಾಗುವ ಗುಣಾತ್ಮಕ ಶಿಕ್ಷಣ, ಪ್ರಾಯೋಗಿಕ ತರಗತಿಗಳು, ಹಂತ ಹಂತದ ಪುನರ್ಮನನಗಳ ಬಗ್ಗೆ ಪ್ರಾಂಶುಪಾಲ ಸಂಜೀವ ಆರ್.ಪಾಟೀಲ ವಿವರಿಸಿದರು. ‘ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್’ ಬಳಗದ ಹಿರಿಯ ಪ್ರಬಂಧಕ ಶಿವರಾಜ ನರೋಣ ವೇದಿಕೆಯಲ್ಲಿದ್ದರು.
ಒಂದು ವಾರದ ಶಿಬಿರದಲ್ಲಿ ವಿವಿಧ ಕಾಲೇಜುಗಳ 120 ವಿದ್ಯಾರ್ಥಿಗಳು ತರಬೇತಿ ಪಡೆದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ ಹರಿದಾಸ, ಎಲ್.ವಿ.ಜಾಜಿ, ವೆಂಕಟೇಶ್ ಮತ್ತು ಸತ್ಯಶ್ರೀ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪರೀಕ್ಷೆಯಲ್ಲಿ ನೂತನ ವಿದ್ಯಾಲಯದ ವಿಶ್ವನಾಥ ಎಸ್. ಪಾಟೀಲ್ (ಪ್ರಥಮ), ಎಸ್.ಬಿ. ಕಾಲೇಜಿನ ಪರ್ವತ ಕುಮಾರ ಎಸ್. (ದ್ವಿತೀಯ) ಹಾಗೂ ಸರ್ಕಾರಿ ಸ್ವತಂತ್ರ ಕಾಲೇಜಿನ ಶಿವಾನಂದ (ತೃತೀಯ) ಸ್ಥಾನ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.