ಹದಗೆಟ್ಟ ರಸ್ತೆ; ಸಂಚಾರ ಕಿರಿಕಿರಿ
ಚಿತ್ತಾಪುರ: ಇಲ್ಲಿಂದ ಗುಲ್ಬರ್ಗಕ್ಕೆ ಸಂಪರ್ಕ ಜೊಡಿಸುವ ಚಿತ್ತಾಪುರ- ಮಳಖೇಡ ಮುಖ್ಯ ರಸ್ತೆಯ ಮಾರ್ಗದಲ್ಲಿರುವ ಮರಗೋಳ ನಾಲಾದ ಹತ್ತಿರ ರಸ್ತೆಯು ಹದಗೆಟ್ಟು ವಾಹನ ಓಟಾಟಕ್ಕೆ ತೊಂದರೆಯಾಗುತ್ತಿದೆ.
ನಾಲಾದ ಹತ್ತಿರದ ರಸ್ತೆಯಲ್ಲಿ ಮೊಣಕಾಲು ಮಟ್ಟದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ನೀರು ನಿಂತು ಇಲ್ಲಿ ವಾಹನ ಓಡಿಸಲು ಕಷ್ಟ ಪಡಬೇಕು. ಒಂದು ಗುಂಡಿ ತಪ್ಪಿಸುವುದರಲ್ಲಿ ಮತ್ತೊಂದು ಗುಂಡಿಯಲ್ಲಿ ವಾಹನದ ಗಾಲಿಗಳು ಸಿಕ್ಕಿಬೀಳುತ್ತವೆ . ವಾಹನಗಳು ಅತ್ತಿತ್ತ ವಾಲುತ್ತಾ ಸಾಗುವುದರಿಂದ ಚಾಲಕರಿಗೆ ವಾಹನ ಓಡಿಸಲು ಕಿರಿಕಿರಿಯಾಗುತ್ತಿದೆ. ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಮರಗೋಳ ನಾಲಾಕ್ಕೆ ಇರುವ ಸಣ್ಣ ಸೇತುವೆ ತೆರವು ಮಾಡಿ ಕ್ಷೇತ್ರದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್ ಅವರ ಅಧಿಕಾರಾವಧಿಯಲ್ಲಿ ಕೆಆರ್ಡಿಸಿಎಲ್ ವತಿಯಿಂದ ದೊಡ್ಡ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆ ಎರಡೂ ಕಡೆಗೆ ಡಾಂಬರ್ ರಸ್ತೆ ನಿರ್ಮಾಣ ಮಾಡಲೆಂದು ಮೆಟಲಿಂಗ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಕಳೆದ 4 ವರ್ಷದಿಂದ ಈ ರಸ್ತೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಭರವಸೆ: `ಚಿತ್ತಾಪುರದಿಂದ ಮಳಖೇಡ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದೇ ರಸ್ತೆಯ ಜೊತೆಯಲ್ಲಿ ಮರಗೋಳ ನಾಲಾದ ಹತ್ತಿರ ಬಾಕಿ ಇರುವ ರಸ್ತೆ ನಿರ್ಮಾಣ ಕಾಮಗಾರಿಯನ್ನೂ ಮಾಡಿಸಲಾಗುತ್ತಿದೆ. ಹದಗೆಟ್ಟ ರಸ್ತೆಯ ಸುಧಾರಣೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಸ್ತೆ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು~ ಎಂದು ಚಿತ್ತಾಪುರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಇಸ್ಮಾಯಿಲ್ ಪಟೇಲ್ ಭರವಸೆ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.