‘ಕುದ್ಮುಲ್ ರಂಗರಾವ್ ಮಹಾ ಮಾನವತಾವಾದಿ’

ಬೆಂಗಳೂರು: ‘ಕುದ್ಮುಲ್ ರಂಗರಾವ್ ದಲಿತೋದ್ಧಾರಕ ಮಾತ್ರವಲ್ಲ ಮಹಾ ಮಾನವತಾವಾದಿ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಡಾ. ಸುಭಾಷ್ ಭರಣಿ ಹೇಳಿದರು.
ಸೋಮವಾರ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಅಭಿನಂದನಾ ಸಮಾರಂಭದಲ್ಲಿ ಬಿಡುಗಡೆಗೊಂಡ ಕೊಡಸೆ ಅವರ ‘ದಲಿತೋದ್ಧಾರದ ಗುರು ಕುದ್ಮುಲ್ ರಂಗರಾವ್’ ಕೃತಿಯ ಕುರಿತು ಅವರು ಮಾತನಾಡಿದರು.
‘ಅತ್ಯಂತ ಬಡತನದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕುದ್ಮುಲ್ ರಂಗರಾವ್ ಅವರು 1892ರಲ್ಲಿ ದಲಿತರಿಗಾಗಿ ಪ್ರತ್ಯೇಕ ಶಾಲೆ ತೆರೆದಾಗ ಬಿ.ಆರ್. ಅಂಬೇಡ್ಕರ್ ಅವರು ಒಂದು ವರ್ಷದ ಮಗುವಾಗಿದ್ದರು. ಎಷ್ಟು ಮುಂಚಿತವಾಗಿ ಕುದ್ಮುಲ್ ಅವರು ದಲಿತರ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂಬುದು ಇದರಿಂದ ತಿಳಿಯುತ್ತದೆ’ ಎಂದರು.
‘ಅಂಬೇಡ್ಕರ್ ಅವರು ದಲಿತ ಜನಾಂಗದಲ್ಲಿ ಹುಟ್ಟಿ, ಅಸ್ಪೃಶ್ಯತೆಯನ್ನು ಅನುಭವಿಸಿ ತನ್ನ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ್ದು ದೊಡ್ಡದಲ್ಲ. ಅಂಥ ಯಾವುದೇ ಅಸ್ಪೃಶ್ಯತೆ, ಶೋಷಣೆಯ ಅನುಭವವಿಲ್ಲದ ರಂಗರಾವ್ ಅವರು ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ್ದು ಅಚ್ಚರಿಯ ಸಂಗತಿ. ಇಂಥ ಉದಾಹರಣೆಗಳು ಬೇರೆ ಸಿಗುವುದಿಲ್ಲ’ ಎಂದರು.
ಮತ್ತೊಂದು ಕೃತಿ ‘ಶ್ರೀ ಚೌಡೇಶ್ವರಿ ಪ್ರಸನ್ನ’ ಕಾದಂಬರಿ ಬಗ್ಗೆ ಡಾ. ಬೈರಮಂಗಲರಾಮೇಗೌಡ ಮಾತನಾಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿನಂದನಾ ಭಾಷಣ ಮಾಡಿದರು.
ಸಿರಿವರ ಪ್ರಕಾಶನ ಹೊರತಂದ ಲಕ್ಷ್ಮಣ ಕೊಡಸೆ ಅವರ ಬದುಕು–ಮೆಲುಕು–ವಿಮರ್ಶೆ ಒಳಗೊಂಡ ‘ಕುಟಜ’ ಕೃತಿಯನ್ನು ಉದ್ಯಮಿ ಜೆ.ಪಿ. ನಾರಾಯಣ ಸ್ವಾಮಿ ಬಿಡುಗಡೆ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.