ನವದೆಹಲಿ (ಐಎಎನ್ಎಸ್): ಮುಂದಿನ ಹತ್ತು ವರ್ಷಗಳಲ್ಲಿ ಹಜ್ ಯಾತ್ರೆಗೆ ನೀಡುವ ಧನಸಹಾಯವನ್ನು ತೆಗೆದುಹಾಕುವಂತೆ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
`ಮುಸ್ಲಿಂರ ಪವಿತ್ರ ಸ್ಥಳ ಮೆಕ್ಕಾಗೆ ಹಜ್ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಸರ್ಕಾರದ ಧನಸಹಾಯ ಯೋಜನೆಗೆ ವಿರುದ್ಧವಾಗಿ ಸಹಾಯ ಮಾಡಬಾರದು~ ಎಂದು ಹೇಳಿರುವ ನ್ಯಾಯಮೂರ್ತಿ ಅಫ್ತಾಬ್ ಆಲಮ್ ನೇತೃತ್ವದ ಪೀಠವು ಸರ್ಕಾರದಿಂದ ಮೆಕ್ಕಾಗೆ ಕಳುಹಿಸುವ ಸದ್ಭಾವನಾ ನಿಯೋಗಕ್ಕೂ ಕತ್ತರಿ ಹಾಕಿದೆ.
ಪೀಠವು ತನ್ನ ಮತ್ತೊಂದು ಮಹತ್ವದ ನಿರ್ದೇಶನದಲ್ಲಿ ~ಕೇಂದ್ರವು ಪ್ರತಿವರ್ಷ ಮೆಕ್ಕಾಗೆ ಕಳುಹಿಸುವ ಸದ್ಭಾವನಾ ನಿಯೋಗದಲ್ಲಿ ಇನ್ನು ಮುಂದೆ ಕೇವಲ ಇಬ್ಬರು ಸದಸ್ಯರನ್ನು ಮಾತ್ರ ಕಳುಹಿಸಬೇಕು~ ಎಂದು ಆದೇಶಿಸಿದೆ.
ಪ್ರಸ್ತುತ ಹಜ್ ಯಾತ್ರೆಯ ಸದ್ಭಾವನಾ ನಿಯೋಗವು 30 ಸದಸ್ಯರನ್ನು ಒಳಗೊಂಡಿದೆ.
ಅಲ್ಲದೇ ನ್ಯಾಯಾಲಯವು ಹಜ್ ಯಾತ್ರೆಗೆ ಹೇಗೆ ಧನಸಹಾಯ ನೀಡುವಿರಿ ಮತ್ತು ಯಾತ್ರೆಗೆ ತಗಲುವ ಒಟ್ಟು ವೆಚ್ಚ ಎಷ್ಟು ಎಂಬ ವಿವರ ಕುರಿತು ರಾಜ್ಯಮಟ್ಟದ ಹಜ್ ಸಮಿತಿಗಳು ಹಾಗೂ ಭಾರತೀಯ ಹಜ್ ಸಮಿತಿಯಿಂದ ಮಾಹಿತಿ ಬಯಸಿದೆ.