ಬೆಳಗಾವಿ: ಮಹಾರಾಷ್ಟ್ರದ ಜಲಾಶಯಗಳಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳಲ್ಲಿ ಭಾನುವಾರ ಪ್ರವಾಹ ಇಳಿಮುಖವಾಗಿದೆ.
ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 73,446 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹ ಇಳಿದ ಪರಿಣಾಮ ಜಿಲ್ಲೆಯಲ್ಲಿ ಭಾನುವಾರ 10 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ರಾಯಬಾಗ ತಾಲ್ಲೂಕಿನ ಕುಡಚಿ, ಚಿಕ್ಕೋಡಿ ತಾಲ್ಲೂಕಿನ ಕಾರದಗಾ- ಭೋಜ್ ಸೇತುವೆಗಳಲ್ಲಿ ಭಾನುವಾರ ವಾಹನಗಳು ನಿರಾತಂಕವಾಗಿ ಸಂಚರಿಸಿದವು.
ಚಿಕ್ಕೋಡಿ ತಾಲ್ಲೂಕಿನ ಏಳು ಸೇತುವೆ, ಗೋಕಾಕಿನ ಒಂದು ಸೇತುವೆ ಇನ್ನೂ ನೀರಿನಲ್ಲಿ ಮುಳುಗಿದ್ದು, ಜನರು ಪರ್ಯಾಯ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ.
ರಾಮದುರ್ಗ ಪಟ್ಟಣ ಹಾಗೂ ಕೆಲವು ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿರುವುದು ಸಂಪೂರ್ಣವಾಗಿ ಇಳಿದಿದೆ. ಆದರೆ ಮನೆಯೊಳಗೆ ಹಾಗೂ ಗ್ರಾಮದಲ್ಲಿ ತುಂಬಿಕೊಂಡಿರುವ ಕೆಸರು ಜನರನ್ನು ಕಾಡುತ್ತಿದೆ.