ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕೇವಲ 100 ದಿನಗಳಲ್ಲೇ ನಿಷ್ಕ್ರಿಯವಾಗಿದೆ. ಸರ್ಕಾರ ಬದುಕಿದೆಯೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಟೀಕಿಸಿದರು.
ಶನಿವಾರ ಬಿಜೆಪಿ ಕಚೇರಿಯಲ್ಲಿ `ಯುಪಿಎ ಮೈತ್ರಿಕೂಟದ 100 ಹಗರಣಗಳು' ಹಾಗೂ `ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ 100 ದಿನಗಳು 101 ತಪ್ಪುಗಳು' ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಚಿವರು ತಮ್ಮ ಸ್ವಂತ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅನೇಕ ಸಚಿವರು ವಿಧಾನಸೌಧಕ್ಕೂ ಬರುತ್ತಿಲ್ಲ. ಸಚಿವರನ್ನು ಕ್ರಿಯಾಶೀಲರನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಗಮನ ನೀಡಲಿ ಎಂದು ಎಚ್ಚರಿಸಿದರು.
ಅತಿವೃಷ್ಟಿ ಉಂಟಾದ ಸ್ಥಳಗಳಿಗೆ ಇದುವರೆಗೆ ಯಾವುದೇ ಸಚಿವರು ಭೇಟಿ ನೀಡಿಲ್ಲ ಎಂದು ಟೀಕಿಸಿದರು.
ಜೈಲಿನಲ್ಲಿರುವ ಅಲ್ಪಸಂಖ್ಯಾತರನ್ನು `ಮುಗ್ದ ಮುಸ್ಲಿಂರು' ಎಂದು ಕರೆಯುವ ಮೂಲಕ ಮುಖ್ಯಮಂತ್ರಿಗಳು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಗಳೇ `ಮುಗ್ದರು' ಎಂದು ಪ್ರಮಾಣಪತ್ರ ನೀಡುವುದಾದರೆ ನ್ಯಾಯಾಲಯಗಳು ಏಕೆ ಬೇಕು ಎಂದು ಪ್ರಶ್ನಿಸಿದರು.
ಸಂಸತ್ ಸದಸ್ಯ ಅನಂತಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹಾಜರಿದ್ದರು.