ತುಮಕೂರು: ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸೋಮವಾರ 106ನೇ ವರ್ಷಕ್ಕೆ ಕಾಲಿಟ್ಟರು. ಮಕ್ಕಳಿಗೆ ಅನ್ನ ಮತ್ತು ಶಿಕ್ಷಣ ದಾಸೋಹದ ಮೂಲಕ ನಾಡಿನಾದ್ಯಂತ ಹೆಸರಾಗಿರುವ ಶಿವಕುಮಾರ ಸ್ವಾಮೀಜಿಯವರನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಮುಂಜಾನೆಯಿಂದಲೇ ಮಠದಲ್ಲಿ ನೆರೆದಿತ್ತು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಸೋಮಣ್ಣ, ಎಸ್.ಶಿವಣ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ, ಸಂಸದ ಜಿ.ಎಸ್.ಬಸವರಾಜ್ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದರು. ಹುಟ್ಟುಹಬ್ಬ ಆಚರಣೆ ಸರಳವಾಗಿತ್ತು. ಇದೇ ತಿಂಗಳು ಭಕ್ತ ವೃಂದ, ಗುರುವಂದನೆ ಸಲ್ಲಿಸಲು ಬಹು ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸಲಿದೆ.
ಪ್ರತಿ ವರ್ಷ ಹುಟ್ಟು ಹಬ್ಬದಂದು ಪಾದಪೂಜೆ ಬಳಿಕ ಸ್ವಾಮೀಜಿ ಭಕ್ತರನ್ನು ಉದ್ದೇಶಿಸಿ ಮಾತನಾಡುವುದು ವಾಡಿಕೆ. ಆದರೆ ಈ ಬಾರಿ ಮಾತನಾಡಲಿಲ್ಲ. ಮಠದ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಸ್ವಾಮೀಜಿ ಆಶೀರ್ವಚನ ನೀಡಲಿಲ್ಲ.