ಬೆಂಗಳೂರು: ಆರೋಗ್ಯ ಕವಚ (108) ಯೋಜನೆಯ ಅಂಬುಲೆನ್ಸ್ ನೌಕರರ ವೇತನ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಜಿವಿಕೆ-ಇಎಂಆರ್ಐ ಸಂಸ್ಥೆಯ ಆಡಳಿತ ಮಂಡಳಿ ಒಪ್ಪಿಕೊಂಡಿರುವುದರಿಂದ ನೌಕರರು ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ.
`ನಗರದಲ್ಲಿ ಏಳು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ನೌಕರರನ್ನು ಮಂಗಳವಾರ ಭೇಟಿ ಮಾಡಿದ ಜಿವಿಕೆ-ಇಎಂಆರ್ಐ ಸಂಸ್ಥೆಯ ಮುಖ್ಯ ನಿರ್ವಾಹಣಾಧಿಕಾರಿ ಡಿ.ವಿ.ಬದರಿನಾಥ್ ಅವರು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯಗೊಳಿಸಲಾಗಿದೆ~ ಎಂದು ರಾಜ್ಯ ಆರೋಗ್ಯ ಕವಚ ನೌಕರರ ಸಂಘದ ಉಪಾಧ್ಯಕ್ಷ ಎಂ.ಎಸ್.ಪ್ರಕಾಶ್ ತಿಳಿಸಿದ್ದಾರೆ.
`ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದರು. ನೌಕರರ ಬಹುಪಾಲು ಬೇಡಿಕೆಗಳನ್ನು ಈಡೇರಿಸಲು ಜಿವಿಕೆ-ಇಎಂಆರ್ಐ ಸಂಸ್ಥೆ ಒಪ್ಪಿಕೊಂಡಿದೆ. ಆದರೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆಗೆ ಸರ್ಕಾರ ಒಪ್ಪಿಲ್ಲ~ ಎಂದಿದ್ದಾರೆ.
`2011ರ ಏಪ್ರಿಲ್ನಿಂದಲೇ ಅನ್ವಯವಾಗುವಂತೆ ನೌಕರರ ವೇತನದಲ್ಲಿ ಶೇ 10ರಷ್ಟು ಹೆಚ್ಚಳ ಮಾಡಲು ಮತ್ತು ಮಹಿಳಾ ನೌಕರರನ್ನು ರಾತ್ರಿ ಪಾಳಿ ಕೆಲಸಕ್ಕೆ ನಿಯೋಜಿಸದಿರಲು ಒಪ್ಪಿಗೆ ಸೂಚಿಸಲಾಗಿದೆ. ನೌಕರರ ಭವಿಷ್ಯನಿಧಿ ಮತ್ತು ಇಎಸ್ಐ ಹಣವನ್ನು ಸಕಾಲಕ್ಕೆ ಪಾವತಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನೌಕರರಿಗೆ ನೀಡಲಾಗಿದೆ~ ಎಂದು ಬದರಿನಾಥ್ `ಪ್ರಜಾವಾಣಿ~ಗೆ ತಿಳಿಸಿದರು.
`ನೌಕರರನ್ನು ಅವರ ಸ್ವಂತ ಜಿಲ್ಲೆಗಳಿಗೆ ಅಥವಾ ಅಕ್ಕಪಕ್ಕದ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ~ ಎಂದು ಅವರು ಹೇಳಿದರು.