ರಿಪ್ಪನ್ಪೇಟೆ: ವಿಧಾನಸಭಾ ಚುನಾವಣೆಯ ಪ್ರಚಾರಕಾರ್ಯ ರಂಗೇರುತ್ತಿದ್ದು, ಕೆಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಅಭ್ಯರ್ಥಿ ಆರ್.ಎಂ. ಮಂಜುನಾಥ ಗೌಡರ ಪರ ಏ. 10ರಂದು ಬೆಳಿಗ್ಗೆ 11ಕ್ಕೆ ಗರ್ತಿಕೆರೆಯ ರಾಮನಸರದಲ್ಲಿ ಆಯೋಜಿಸಲಾಗಿರುವ ಕರ್ನಾಟಕ ಜನತಾ ಪಕ್ಷದ ಭಾರಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ಎಂ.ಎಂ. ಪರಮೇಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಜಿಲ್ಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಈ ಸಭೆಯಲ್ಲಿ ಜಿಲ್ಲಾ ಕೆಜೆಪಿ ಅಧ್ಯಕ್ಷ ಜ್ಯೋತಿ ಪ್ರಕಾಶ, ಜಿಲ್ಲೆಯ ಕೆಜೆಪಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ತೀರ್ಥಹಳ್ಳಿ ಕ್ಷೇತ್ರದ ಡಾ.ಆರ್.ಎಂ. ಮಂಜುನಾಥಗೌಡ, ಸೊರಬದ ಹರತಾಳು ಹಾಲಪ್ಪ, ಸಾಗರದ ಬಿ.ಆರ್. ಜಯಂತ್ ಮತ್ತು ಪಕ್ಷದ ಮುಖಂಡರು, ಸಹಕಾರಿ ಕ್ಷೇತ್ರದ ಧುರೀಣರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ, ಸಿಮುಲ್ ಶಿವಕುಮಾರ್, ಜಿಲ್ಲಾ ಕೆಜೆಪಿ ಖಜಾಂಚಿ ಸುರೇಶ್, ಕೆಜೆಪಿ ಮುಖಂಡರಾದ ಎಂ.ಬಿ. ಮಂಜುನಾಥ, ಅರಸಾಳು ಹುಸೇನಸಾಬ್, ನಾಗರಾಜ, ಕಲ್ಲೂರು ತೇಜಮೂರ್ತಿ, ದಲಿತ ಮುಖಂಡ ಸೋಮಶೇಖರ, ಹೆದ್ದಾರಿಪುರದ ಮಂಜುನಾಥ ಶೆಟ್ಟಿ, ರಮಾನಂದ ಭಟ್, ಹೊಳೆಕಿವಿ ರಾಘವೇಂದ್ರ ಮತ್ತು ಮಾಗೋಡು ಗಣಪತಿ ಹಾಜರಿದ್ದರು.