ಚಿಕ್ಕಮಗಳೂರು: ಅಳಿವಿನಂಚಿನಲ್ಲಿರುವ ಅಮೃತ್ ಮಹಲ್ ತಳಿ ಹೋರಿಗಳ ಹರಾಜು ಇದೇ 11ರಂದು ತಿಪಟೂರಿನ ಕೊನೇಹಳ್ಳಿಯಲ್ಲಿ ಮತ್ತು 18ರಂದು ಬೀರೂರಿನ ಅಮೃತ್ ಮಹಲ್ ಕಾವಲ್ ರಾಸು ತಳಿ ಸಂವರ್ಧನ ಕೇಂದ್ರದಲ್ಲಿ ನಡೆಯಲಿದೆ.
ಪೈಪೋಟಿಯ ಹರಾಜು ನಡೆಯುವಂತೆ ಕಾಣುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿ 62 ಕರುಗಳು ಮತ್ತು ಬೀಜದ 4 ಹೋರಿಗಳು ಹರಾಜಿಗೆ ಸಿದ್ಧವಾಗಿವೆ. ಕಳೆದ ವರ್ಷ ಈ ಕೇಂದ್ರಗಳಲ್ಲಿ ಒಂದೊಂದು ಜೋಡಿ ಕನಿಷ್ಠ 45 ಸಾವಿರ ರೂಪಾಯಿಂದ 1.37 ಲಕ್ಷ ರೂಪಾಯಿಗೆ ಹರಾಜಾಗಿದ್ದವು. ಅರಸೀಕೆರೆ ತಾಲ್ಲೂಕಿನ ರೈತರು ಅತೀ ಹೆಚ್ಚು ಹಣಕ್ಕೆ ಹರಾಜು ಕೂಗಿ ದಾಖಲೆಗೆ ಪಾತ್ರರಾಗಿದ್ದರು.
ಕಳೆದ ಬಾರಿ 25.42 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಈ ಬಾರಿಯೂ ಇಷ್ಟೇ ಅಥವಾ ಇದಕ್ಕೂ ಹೆಚ್ಚಿನ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು.