ಪಟ್ನಾ (ಐಎಎನ್ಎಸ್): ಪ್ರತಿಷ್ಠಿತ ಹಾಗೂ ತೀವ್ರ ಸ್ಪರ್ಧಾತ್ಮಕವಾದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಜಂಟಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಐಐಟಿ -ಜೆಇಇ) ತೇರ್ಗಡೆಯಾಗುವ ಮೂಲಕ ಬಿಹಾರದ ಹನ್ನೆರಡೂವರೆ ವರ್ಷದ ಬಾಲಕನೊಬ್ಬ ಸಾಧನೆ ಮೆರೆದಿದ್ದಾನೆ.
ಅಖಿಲ ಭಾರತ ಮಟ್ಟದಲ್ಲಿ ಮುಂಬೈ ವಲಯದಿಂದ 8,137ನೇ ರ್ಯಾಂಕ್ ಪಡೆಯುವ ಮೂಲಕ ಭೋಜಪುರ ಜಿಲ್ಲೆಯ ಸತ್ಯಂ ಕುಮಾರ್ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿದ್ದಾನೆ.
`ಐಐಟಿ-ಜೆಇಇಯಲ್ಲಿ ತೇರ್ಗಡೆಹೊಂದಿರುವುದು ಸಂತಸ ನೀಡಿದೆ. ಆದರೆ ಕಡಿಮೆ ರ್ಯಾಂಕ್ ಬಂದಿರುವುದರಿಂದ ನಾನು ಈ ವರ್ಷ ಐಐಟಿಗೆ ಪ್ರವೇಶ ಪಡೆಯುವುದಿಲ್ಲ. ಉತ್ತಮ ರ್ಯಾಂಕ್ ಪಡೆಯಲು ಮುಂದಿನ ವರ್ಷ ಮತ್ತೆ ಸಿಇಟಿ ಬರೆಯುತ್ತೇನೆ~ ಎಂದು ಕುಮಾರ್ ತಿಳಿಸಿದ್ದಾನೆ.
ಫೇಸ್ಬುಕ್ ಮಾದರಿಯಲ್ಲಿಯೇ ಸಾಫ್ಟ್ವೇರ್ ಕಂಪೆನಿಯೊಂದನ್ನು ಆರಂಭಿಸುವುದು ತನ್ನ ಮಹತ್ವಾಕಾಂಕ್ಷೆ ಎಂದು ಕುಮಾರ್ ಹೇಳಿದ್ದಾನೆ.
ಕೃಷಿಕರಾಗಿರುವ ಕುಮಾರ್ ತಂದೆ ಸಿದ್ಧನಾಥ್ ಸಿಂಗ್ ತಮ್ಮ ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. `ಐಐಟಿ-ಜೆಇಇಯಲ್ಲಿ ಅರ್ಹತೆ ಪಡೆದ ಅತ್ಯಂತ ಕಿರಿಯ ವ್ಯಕ್ತಿ ನನ್ನ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ~ ಎಂದು ಸಿದ್ಧನಾಥ್ ಸಿಂಗ್ ಹೇಳಿದ್ದಾರೆ.
ಕುಮಾರ್ ಬಾಲ್ಯದಲ್ಲಿಯೇ ತುಂಬಾ ಪ್ರತಿಭಾವಂತನಾಗಿದ್ದ. ಆತ ಐಐಟಿ-ಜೆಇಇಯಲ್ಲಿ ತೇರ್ಗಡೆಯಾಗಿರುವುದಕ್ಕೆ ಇಡೀ ಗ್ರಾಮದ ಜನರು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕುಮಾರ್ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಾನೆ.