ವಿಜಾಪುರ: ತಾಲ್ಲೂಕಿನ ಕಾರಜೋಳ ಏತ ನೀರಾವರಿ ಯೋಜನೆಯಿಂದ ಸುಮಾರು 5 ಸಾವಿರ ಎಕರೆ ಭೂಮಿ ನೀರಾವರಿ ಯೋಜನೆಗೆ ಒಳಪಡಲಿದೆ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ತಾಲ್ಲೂಕಿನ ಕಾರಜೋಳದಲ್ಲಿ ಮಂಗಳವಾರ ಆಯೋಜಿಸಿದ್ದ ಏತ ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಏತ ನೀರಾವರಿ ಯೋಜನೆಯು ಕೃಷ್ಣಾ ನದಿಯಿಂದ 15.750 ಕಿ.ಮಿ.ಯಷ್ಟು 1200 ಮಿ.ಮಿ. ಎಂ.ಎಸ್ ಕೊಳವೆ ಮಾರ್ಗವಿದ್ದು, 1.890 ಕ್ಯೂಸೆಕ್ ನೀರನ್ನು ಎತ್ತುವ ಸಾಮರ್ಥ್ಯ ಹೊಂದಿದೆ ಎಂದರು.
ಕಾಮಗಾರಿ ಪೂರ್ತಿಯಾದ ನಂತರ ಕಾರಜೋಳ, ದೂಡಿಹಾಳ, ಮುಳವಾಡ ಮತ್ತು ಕಾಖಂಡಕಿ ಗ್ರಾಮಗಳ ಸುಮಾರು 5 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಈ ಯೋಜನೆಯ ಅನುಷ್ಠಾನಕ್ಕೆ ಸುಮಾರು 132 ಎಕರೆ ಭೂಮಿಯನ್ನು ಸ್ವಾಧೀನ ಮಾಡಬೇಕಾಗಿದೆ. ಭೂಸ್ವಾಧೀನಕ್ಕೆ ಸರ್ಕಾರ ರೂ 5 ಕೋಟಿ ಮೀಸಲಿಡಲಾಗಿದೆ.
ರೈತರು ತಮ್ಮ ಭೂಮಿಯನ್ನು ಯಾವುದೇ ಅಡೆತಡೆಯಿಲ್ಲದೇ ಭೂಮಿ ನೀಡಿದರೆ ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸ ಲಾಗುವುದು. ಕಾಮಗಾರಿ 2 ವರ್ಷದ ಟೆಂಡರ್ ಅವಧಿಯದ್ದಾಗಿದ್ದು, ಅವಧಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯ 56 ಹೊಸ ಕೆರೆಗಳ ನಿರ್ಮಾಣ, 81 ಬಾಂದಾರ ನಿರ್ಮಾಣ, 39 ಬಾಂದಾರು ಸೇತುವೆ ನಿರ್ಮಾಣ, 12 ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಸ್ಸಿ, ಎಸ್ಟಿ, ವಿವಿಧ 1400 ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ.
ಸುಮಾರು 1200 ವರ್ಷಗಳ ಇತಿಹಾಸವಿರುವ ಕಾರಜೋಳದ ಕಲ್ಮೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ರೂ 1 ಕೋಟಿ ಮಂಜೂರು ಮಾಡಲಾಗಿದೆ. ಅವಳಿ ಜಿಲ್ಲೆಗಳಲ್ಲಿ ಸುಮಾರು ರೂ 268 ಕೋಟಿ ವೆಚ್ಚದಲ್ಲಿ 1.20 ಲಕ್ಷ ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ ಮಾತನಾಡಿದರು. ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯೋಜನೆ ರೈತರಿಗೆ ವರದಾನವಾಗಲಿದೆ ಎಂದರು.
ಜಿಲ್ಲಾ ಸಚಿವ ಎಸ್.ಕೆ. ಬೆಳ್ಳುಬ್ಬಿ, ಜಿ.ಪಂ. ಅಧ್ಯಕ್ಷೆ ಕಾವ್ಯಾ ದೇಸಾಯಿ, ಜಿ.ಪಂ. ಸದಸ್ಯ ಉಮೇಶ ಕೋಳಕೂರ, ತಾ.ಪಂ. ಸದಸ್ಯ ಮುತ್ತಪ್ಪ ಸಿದರೆಡ್ಡಿ, ಕಾರಜೋಳ ಗ್ರಾ.ಪಂ. ಅಧ್ಯಕ್ಷ ಭೀಮೇಶ ಆಸಂಗಿ, ಸಿದ್ದಮ್ಮ ಮಾದರ, ಸುರೇಶ ವಠಾರ, ಬಸವರಾಜ ದೇಸಾಯಿ, ಎಂ.ಎನ್. ಯರಗಲ್, ಸಂಜೀವ ಮರಡ್ಡಿ, ಆರ್.ಬಿ. ಪಾಟೀಲ, ಎಸ್.ಬಿ. ಸಿದ್ಧಗಂಗಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.