ಸೋಮವಾರಪೇಟೆ: ಸಮೀಪದ ಆಲೂರು ಸಿದ್ದಾಪುರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಆಗಮಿಸಲಿದ್ದು, ಸುಮಾರು 125 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಹಲವಾರು ನೂತನ ಕಟ್ಟಡ ಉದ್ಘಾಟಿಸುವರು.
ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಮೂರು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಅಚ್ಚುಕಟ್ಟಾದ ಕಾರ್ಯಕ್ರಮಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ.
ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ 1330 ಲಕ್ಷ ರೂಪಾಯಿಗಳ 8 ಕಾಮಗಾರಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 6640 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುವ 2 ಕಾಮಗಾರಿ, ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ಹಾರಂಗಿ ಪುನರ್ವಸತಿ ಯೋಜನೆಯಡಿ ಕೈಗೊಳ್ಳುವ 2258 ಲಕ್ಷ ರೂಪಾಯಿ ವೆಚ್ಚದ 27 ಕಾಮಗಾರಿಗಳಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು.
ಆಲೂರು ಸಿದ್ಧಾಪುರದಲ್ಲಿ ಉದ್ಘಾಟನೆಗೊಳ್ಳಲು ಈಗಾಗಲೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ಹಾಗೂ ಬಾಲಕರ ವಸತಿಗೃಹ ಕಟ್ಟಡಗಳು ಸಿದ್ಧಗೊಂಡಿವೆ.