ರಾಯಚೂರು: ಕಣ್ವಮಠ ಸಂಸ್ಥಾಪಕರಾದ ಶ್ರೀಮನ್ ಮಾಧವತೀರ್ಥ ಶ್ರೀಪಾದಂಗಳವರ 203ನೇ ಆರಾಧನಾ ಪಂಚರಾತ್ರೋತ್ಸವ ಕಾರ್ಯಕ್ರಮವನ್ನು ಇದೇ 12ರಿಂದ 16ರವರೆಗೆ ಶ್ರೀ ಮಾಧವತೀರ್ಥರ ಮೂಲ ಬೃಂದಾವನ ಸ್ಥಳವಾದ ಲಿಂಗಸುಗೂರು ತಾಲ್ಲೂಕಿನ ಸುಕ್ಷೇತ್ರ ಬುದ್ದಿನ್ನಿ(ಸಾನಬಾಳ) ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಹುಣಸಿಹೊಳೆ ಕಣ್ವಮಠಾಧೀಶರಾದ ಶ್ರೀ ವಿದ್ಯಾಭಾಸ್ಕರ ತೀರ್ಥರು ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಯುಕ್ತ ಹಯಗ್ರೀವ ಜ್ಞಾನ ಯಜ್ಞ-ಲಕ್ಷ್ಮೀನಾರಾಯಣ ಹವಿರ್ಯಯಜ್ಞಗಳನ್ನು ಆಯೋಜಿಸಲಾಗಿದೆ. ಕಾಶಿ ಕ್ಷೇತ್ರ ವಿದ್ವಾನರಾದ ಲಕ್ಷ್ಮೀಕಾಂತ ಪುರಾಣಿಕ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಹಾಗೂ ದೆಹಲಿಯ ಲಾಲ ಬಹದ್ದೂರು ಶಾಸ್ತ್ರಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಮುಕುಂದ ಕಾಮ್ ಶರ್ಮಾ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಗೌಹತಿಯ ಕೃಷ್ಣ ಪುರಾಣಿಕ, ಓಡಿಸ್ಸಾದ ಡಾ ದಿವಾಕರ ಮಹಾಪಾತ್ರ ಜಗನ್ನಾಥ, ಸಿರಾದ ಸುಧೀಂದ್ರ ಜೊಯಿಸ್, ತಮಿಳುನಾಡಿನ ಸಾರನಾಥ ಕುಡತಲ್ಯ, ಬಳ್ಳಾರಿಯ ಭಾಸ್ಕರರಾವ್, ಅಗಡಿ ಆನಂದ ವನದ ಶಂಕರ ಭಟ್ಟರು, ಮೈಸೂರಿನ ಅಶೋಕ ಪೂಜಾರಿ, ಬೆಂಗಳೂರಿನ ಗಿರೀಶ ಶರ್ಮಾ, ಗುಜರಾತಿನ ಭಾಸ್ಕರ ಶರ್ಮಾ, ಆಂಧ್ರಪ್ರದೇಶ ವಿಶಾಖಪಟ್ಟಣಂದ ರವೀಂದ್ರನಾಥ ಘನಪಾಠಿ, ಔರಂಗಾಬಾದ್ನ ಪ್ರವೀಣಕುಮಾರ, ಸೋಲಾಪುರದ ಉಡುಪಿ ಕೃಷ್ಣಾಚಾರ್ಯ, ಧಾರವಾಡದ ಜೋಶಿ ಆಚಾರ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
12ರಂದು ಅನೆಗುಂದಿಯ ಪಂಡಿತ ಕೊಪ್ರೇಶಾಚಾರ್ಯರು ಹಾಗೂ ಶಹಾಬಾದ್ನ ಪಂಡಿತ ರಾಜೇಂದ್ರಾಚರ್ಯ ಅವರ ಮಾರ್ಗದರ್ಶನದಲ್ಲಿ ಜಪ, ಅನುಷ್ಠಾನ, ಹೋಮ, ಭಾಗವತ ಪರಾಯಣ, ಗೀತಾ, ಈಶಾವಾಸ್ಯ ಉಪನಿಷತ್ತುಗಳ, ಮಧ್ವಾಚಾರ್ಯರ ಸರ್ವ ಮೂಲ ಗ್ರಂಥಗಳ ಪಾರಾಯಣ ನಡೆಯಲಿದೆ. ಲಕ್ಷ್ಮೀ ನಾರಾಯಣ ಯಜ್ಞವನ್ನು ಜಗತ್ತಿಗೆ ಶಾಂತಿ ಸುಭಿಕ್ಷೆ ಅನುಗ್ರಹಿಸಲು ಆಚರಿಸಲಾಗುತ್ತಿದೆ ಎಂದು ಹೇಳಿದರು.
13ರಂದು ವಿದ್ವತ್ ಸಭಾ ಮುಕುಂದ ಶರ್ಮಾ ನೇತೃತ್ವದಲ್ಲಿ ನಡೆಯಲಿದೆ. ಈ ಜ್ಞಾನ ಸಭೆಯಲ್ಲಿ ಆಧ್ಯಾತ್ಮ ಮತ್ತು ತತ್ವಜ್ಞಾನ ದರ್ಶನದ ಪ್ರವಚನ ನಡೆಯಲಿದೆ. 5 ಪ್ರಮುಖ ವಿಷಯಗಳ ಬಗ್ಗೆ ಶಾಸ್ತ್ರಾಧಾರಿತ ಚರ್ಚೆ ನಡೆಯಲಿದೆ. ಯೋಗೀಶ್ವರ ಯಾಜ್ಞವಲ್ಕ್ಯರು ಬ್ರಹ್ಮಾಂಶ ಸಂಭೂತರು, ಬ್ರಹ್ಮದೇವರಿಗೆ ಅಂಶಾವತಾರವಿದೆ, ಮಧ್ವಾಚಾರ್ಯರು ಕಣ್ವಶಾಖಿಯರು, ಕಣ್ವಮಠವೆಂದರೆ ಶುಕ್ಲ ಯುಜರ್ವೇದ ಮಠ, ಮಾಧ್ವರೇ ಕಣ್ವರು ಎಂಬ ವಿಷಯ ಸೇರಿದಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಶಾಸ್ತ್ರಾಧಾರಿತವಾಗಿ ಚರ್ಚೆ ನಡೆಯಲಿದೆ. ಯಾರಾದರೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಮುಕ್ತ ಅವಕಾಶವಿದ್ದು, ವಿಷಯಗಳೆಲ್ಲ ಶಾಸ್ತ್ರಾಧಾರಿತವಾಗಿರಬೇಕು ಎಂಬುದು ಕಡ್ಡಾಯವಾಗಿದೆ ಎಂದು ವಿವರಿಸಿದರು.
13ರಂದು ಸಂಜೆ ದಾಸವಾಣಿ, 14ರಂದು ಮಹಿಳಾ ಸಭಾ, ಅದೇ ದಿನ ರಾತ್ರಿ 9ಕ್ಕೆ ಬೆಂಗಳೂರಿನ ಡಾ.ಮುದ್ದುಮೋಹನ ಅವರಿಂದ ಶಾಸ್ತ್ರೀಯ ಸಂಗೀತ ಸುಧಾ, 15ರಂದು ಪ್ರತಿಭಾ ಪುರಸ್ಕಾರ, 16ರಂದು ಅವಭ್ರತಸ್ನಾನ, ದೇವತಾ ವಿಸರ್ಜನೆ ನಡೆಯಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.