ನವದೆಹಲಿ (ಪಿಟಿಐ): ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದ 13/7ರ ಸ್ಫೋಟ ಪರಕರಣದ ಆರೋಪಿ ನಕ್ವಿ ಅಹಮದ್ ಸಹೋದರ ತಕ್ವಿಗೆ ಸಮನ್ಸ್ ನೀಡಲು ಹೋಗಿದ್ದ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮೂವರು ಅಧಿಕಾರಿಗಳನ್ನು ಸ್ಥಳೀಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸ್ಫೋಟದ ತನಿಖೆ ನಡೆಸುತ್ತಿರುವ ಎಟಿಎಸ್ನ ಮೂವರು ಅಧಿಕಾರಿಗಳು ವಿಚಾರಣೆಗೆ ಸಹಕರಿಸುವಂತೆ ತಿಳಿಸಲು ತಕ್ವಿ ಇರುವ ಸ್ಥಳಕ್ಕೆ ನೋಟಿಸ್ನೊಂದಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ತಕ್ವಿಗೆ ಹಲವು ಸಲ ನೋಟಿಸ್ ನೀಡಲಾಗಿತ್ತು. ಆದರೆ, ಆತ ವಿಚಾರಣೆಗೆ ಹಾಜರಾಗಿರಲಿಲ್ಲ.
ಹೀಗಾಗಿ ಸ್ವತಃ ಆತ ಇರುವ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಫೋಟ ಪ್ರಕರಣದ ವಿಚಾರಣೆಗಾಗಿ ತಮ್ಮಂದಿಗೆ ಮುಂಬೈಗೆ ಬರುವಂತೆ ಸೂಚಿಸಿದರು. ವಿಚಾರಣೆ ನಡೆಸುವುದಾದರೆ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ನಡೆಸಿ ಎಂದು ತಕ್ವಿ ಹೇಳಿದ. ಇದಕ್ಕೆ ಸಿಟ್ಟಾದ ಅಧಿಕಾರಿಗಳು ಆತನನ್ನು ಹೊಡೆಯಲು ಆರಂಭಿಸಿದರು ಎನ್ನಲಾಗಿದೆ.
ಕೂಡಲೇ ತಕ್ವಿ ಕುಟುಂಬ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿತು. ತಕ್ಷಣವೇ ಆಗಮಿಸಿದ ಪೊಲೀಸರು ಈ ಮೂವರು ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡು ಸ್ಥಳೀಯ ಠಾಣೆಗೆ ಕರೆದೊಯ್ದರು. ಓಖ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡದೆಯೇ ಎಟಿಎಸ್ ಅಧಿಕಾರಿಗಳು ತಕ್ವಿ ಮನೆಗೆ ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ಪ್ರವೇಶ ಮತ್ತು ದೈಹಿಕ ಹಲ್ಲೆ ನಡೆಸಿರುವ ಮಹಾರಾಷ್ಟ್ರ ಎಟಿಎಸ್ನಿಂದ ತಮಗೆ ಜೀವ ಬೆದರಿಕೆ ಇದೆ ಎಂದು ತಕ್ವಿ ಕುಟುಂಬ ದೂರು ಸಲ್ಲಿಸಿದೆ.