ಹೈದರಾಬಾದ್ (ಐಎಎನ್ಎಸ್): ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬಂಧಿತರಾದ ವೈಎಸ್ ಆರ್ ಪಕ್ಷದ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ 14 ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿತು.
ಲೋಕಸಭಾ ಸದಸ್ಯನನ್ನು ಜೂನ್ 11ರ ವರೆಗೆ ನ್ಯಾಯಾಂಗ ವಶದಲ್ಲಿ ಇರಿಸುವಂತೆ ಸಿಬಿಐ ನ್ಯಾಯಾಲಯವು ಆಜ್ಞಾಪಿಸಿತು. ಜಗನ್ ಪರ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಅದೇ ರೀತಿ ಜಗನ್ ಮೋಹನ್ ರೆಡ್ಡಿ ಅವರನ್ನು 14 ದಿನಗಳ ಅವಧಿಗೆ ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಮಾಡಿದ ಕೋರಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತು.
ನ್ಯಾಯಾಧೀಶ ಎ.ಪುಲ್ಲಯ್ಯ ಅವರು ಬೆಳಗ್ಗೆ ಉಭಯ ಕಡೆಗಳ ವಾದ ಆಲಿಸಿ ಸಂಜೆ 4,30ಕ್ಕೆ ತಮ್ಮ ಆದೇಶವನ್ನು ಪ್ರಕಟಿಸಿದರು. ಬಿಗಿ ಭದ್ರತೆಯ ಮಧ್ಯೆ ಜಗನ್ ಮೋಹನ್ ರೆಡ್ಡಿ ಅವರನ್ನು ಚಂಚಲಗುಡ ಕೇಂದ್ರ ಸೆರೆಮನೆಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರದ ಅತ್ಯಂತ ಶ್ರೀಮಂತ ಸಂಸತ್ ಸದಸ್ಯರಲ್ಲಿ ಒಬ್ಬರಾದ ಜಗನ್ ಕಳೆದ ವರ್ಷ ತಮ್ಮ ಆಸ್ತಿಪಾಸ್ತಿಯ ಮೌಲ್ಯ 356 ಕೋಟಿ ರೂಪಾಯಿಗಳು ಎಂಬುದಾಗಿ ಪ್ರಕಟಿಸಿದ್ದರು.