ಕೋಲಾರ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಫೆ.14ರಂದು ಕೋಲಾರ-ಚಿಕ್ಕಬಳ್ಳಾಪುರ ಬಂದ್ಗೆ ಕರೆ ನೀಡಿರುವ ಚಿಕ್ಕಬಳ್ಳಾಪುರದ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಗೆ ನಗರದಲ್ಲಿ ಪೂರ್ಣ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ಗಮನವನ್ನು ಸೆಳೆಯುವ ಸಲುವಾಗಿ ಜಿಲ್ಲೆಯ ಎಲ್ಲ ನಾಗರಿಕರು, ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಬಂದ್ನಲ್ಲಿ ಸ್ವಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆ.
ನಗರದ ಜಿಲ್ಲಾ ಸಹಕಾರಿ ಒಕ್ಕೂಟದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ಅವಳಿ ಜಿಲ್ಲೆ ಬಂದ್ ಮಾಡುವುದರ ಮೂಲಕವೇ ಹೋರಾಟವನ್ನು ಶುರು ಮಾಡಬೇಕು. ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಮುಖಂಡರು, ಕಾರ್ಯಕರ್ಯರು ನೆಪಗಳನ್ನು ಒಡ್ಡಿ ನುಣುಚಿಕೊಳ್ಳಬಾರದು ಎಂದು ಹಲವರು ಸಲಹೆ ನೀಡಿದರು.
ಬಂದ್ ಆಚರಿಸಿದ ಮಾತ್ರಕ್ಕೆ ಸರ್ಕಾರದ ಗಮನವನ್ನು ಸೆಳೆದಂತೆ ಆಗುವುದಿಲ್ಲ. ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ದೊರಕುವವರೆಗೂ ಹೋರಾಟವನ್ನು ನಿಲ್ಲಿಸಬಾರದು ಎಂಬ ಸಲಹೆ ಎಲ್ಲರಿಂದಲೂ ಕೇಳಿಬಂತು. ಅಧಿಕಾರವಿಲ್ಲದಿದ್ದಾಗ ಹೋರಾಟ ಮಾಡುವುದು, ತಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ಹೋರಾಟದಲ್ಲಿ ಪಾಲ್ಗೊಳ್ಳದಿರುವ ದ್ವಂದ್ವನೀತಿಯನ್ನೂ ಯಾವ ಪಕ್ಷದ ಪ್ರಮುಖರು, ಕಾರ್ಯಕರ್ತರೂ ಅನುಸರಿಸಬಾರದು ಎಂಬ ಆಗ್ರಹವೂ ಕೇಳಿಬಂತು. ಹೋರಾಟ ಸಮಿತಿಯನ್ನು ರಚಿಸಬೇಕು ಎಂಬ ಸಲಹೆಯನ್ನು ಇದೇ ಸಂದರ್ಭದಲ್ಲಿ ಸ್ಪಷ್ಟವಾಗಿ ತಳ್ಳಿಹಾಕಲಾಯಿತು.
ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ನಗರಸಭೆ ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ, ಸದಸ್ಯರಾದ ಸಲಾವುದ್ದೀನ್ ಬಾಬು, ಖಲೀಲ್, ಕೆಜಿಎಫ್ ಪುರಸಭೆ ಉಪಾಧ್ಯಕ್ಷ ಭಕ್ತವತ್ಸಲಂ, ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಹೊಳಲಿ ಪ್ರಕಾಶ್, ನಟರಾಜ್, ಕೃಷ್ಣಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಜಯದೇವಪ್ರಸನ್ನ, ಟಿ.ಎಲ್.ಕೃಷ್ಣೇಗೌಡ, ಒಕ್ಕೂಟದ ಸದಸ್ಯರಾದ ಎಂ.ಗೋವಿಂದಗೌಡ, ಎಸ್.ಆರ್.ರುದ್ರಸ್ವಾಮಿ, ಅಬ್ದುಲ್ ಖಯೂಂ, ಶಿವಪ್ಪ, ವಿದ್ಯಾರ್ಥಿ ಮುಖಂಡರಾದ ಬಿ.ಸುರೇಶ್ಗೌಡ, ಹೂವಳ್ಳಿ ನಾಗರಾಜ್, ಎಂ.ಜಿ.ಪ್ರಭಾಕರ್, ಬಿ.ವಿ.ಗೋಪಿನಾಥ್, ಹರೀಶ್, ಸಲಹೆಗಳನ್ನು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.