ನವದೆಹಲಿ (ಪಿಟಿಐ): ಕೂಡುಂಕುಳಂ ಪರಮಾಣು ವಿದ್ಯುತ್ ಸ್ಥಾವರ (ಕೆಎನ್ಪಿಪಿ) ಯೋಜನೆ ವಿರೋಧಿಸುತ್ತಿರುವ ಸ್ಥಳೀಯರು ಮತ್ತು ತಮಿಳುನಾಡು ಸರ್ಕಾರಕ್ಕೆ ಈ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ಆತಂಕವನ್ನು ಹೋಗಲಾಡಿಸಲು 15 ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರ ಗುರುವಾರ ರಚಿಸಿದೆ.
ಈ ಸಮಿತಿಯಲ್ಲಿ ಪರಿಸರ ವಿಜ್ಞಾನ, ವಿಕಿರಣ ಸುರಕ್ಷತೆ, ರಿಯಾಕ್ಟರ್ ವಿನ್ಯಾಸ ಮತ್ತು ಸುರಕ್ಷತೆ, ನಿಯಂತ್ರಣ ವ್ಯವಸ್ಥೆ, ಅಣುತ್ಯಾಜ್ಯ ನಿರ್ವಹಣೆ, ಗಂಥಿ ವಿಜ್ಞಾನ, ಸಾಗರ ವಿಜ್ಞಾನ, ಮೀನುಗಾರಿಕೆ, ಭೂಕಂಪ ವಿಜ್ಞಾನ ಮತ್ತು ಥರ್ಮಲ್ ಇಕಾಲಜಿ ತಜ್ಞರು ಇದ್ದಾರೆ.
`ಸ್ಥಳೀಯರೊಂದಿಗೆ ಚರ್ಚಿಸಲು ವೇದಿಕೆ ಕಲ್ಪಿಸುವಂತೆ ತಮಿಳುನಾಡು ಸರ್ಕಾರವನ್ನು ಕೋರಲಾಗುವುದು~ ಎಂದು ಪರಮಾಣು ಇಲಾಖೆ ಹೇಳಿದೆ.
ತಜ್ಞರ ಸಮಿತಿಯಲ್ಲಿ ನೂರುಲ್ ಇಸ್ಲಾಂ ವಿ.ವಿ. ಕುಲಪತಿ ಎ.ಇ. ಮುತ್ತುನಯಗಂ, ಅಡಿಯಾರ್ ಕಾನ್ಸರ್ ಸಂಸ್ಥೆ ಅಧ್ಯಕ್ಷೆಯೂ ಆದ ಗಂಥಿ ವಿಜ್ಞಾನ ತಜ್ಞೆ ವಿ. ಶಾಂತಾ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ ವಿಕಿರಣ ಸುರಕ್ಷತೆ ವಿಭಾಗದ ಮಾಜಿ ನಿರ್ದೇಶಕ ಎಂ.ಆರ್.ಅಯ್ಯರ್, ಟಾಟಾ ಸ್ಮಾರಕ ಆಸ್ಪತ್ರೆಯ ಸರ್ಜನ್ ಸಿ.ಎಸ್. ರಮೇಶ್ ಇದ್ದಾರೆ.