ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸುಮಾರು 1500 ಉಪನ್ಯಾಸಕರ ಹುದ್ದೆಗಳನ್ನು ಹಣಕಾಸು ಇಲಾಖೆಯ ಒಪ್ಪಿಗೆ ಪಡೆದು ಹಂತ ಹಂತವಾಗಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಬುಧವಾರ ಇಲ್ಲಿ ತಿಳಿಸಿದರು.
ಗಣಿತ, ಇಂಗ್ಲಿಷ್ ಸೇರಿದಂತೆ ವಿವಿಧ ವಿಷಯಗಳ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಆದರೆ ಒಮ್ಮೆಲೆ ಎಲ್ಲವನ್ನೂ ಭರ್ತಿ ಮಾಡಲು ಸಾಧ್ಯವಿಲ್ಲ. ಐದು ಹಂತಗಳಲ್ಲಿ ತಲಾ 300 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಎರಡು ವರ್ಷಗಳ ಹಿಂದೆ ಆರಂಭವಾಗಿರುವ 197 ಸರ್ಕಾರಿ ಪದವಿ ಕಾಲೇಜುಗಳ ಪೈಕಿ 17 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ಕ್ಕಿಂತ ಕಡಿಮೆ ಇದೆ. ಹಾಸನದಲ್ಲಿ 13 ಮತ್ತು ಹೊಳೆನರಸೀಪುರದಲ್ಲಿ 19 ವಿದ್ಯಾರ್ಥಿಗಳಿದ್ದಾರೆ.
ಈ ರೀತಿ ವಿದ್ಯಾರ್ಥಿಗಳು ಕಡಿಮೆ ಇರುವ ಕಾಲೇಜುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು. ಮಾರ್ಚ್ 15ರಂದು ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
19 ಖಾಸಗಿ ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇವೆಲ್ಲ ಸುಮಾರು 50 ವರ್ಷದ ಹಳೆಯ ಕಾಲೇಜುಗಳಾಗಿವೆ. ಅನುದಾನಕ್ಕೆ ಒಳಪಡಿಸುವುದರಿಂದ 5-6 ಕೋಟಿ ರೂಪಾಯಿ ವೆಚ್ಚವನ್ನು ಸರ್ಕಾರ ಭರಿಸಬೇಕಾಗುತ್ತದೆ ಎಂದರು.
ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಬೋಧಕ ಸಿಬ್ಬಂದಿಗೆ ಯುಜಿಸಿ ಪರಿಷ್ಕೃತ ವೇತನ ಶ್ರೇಣಿ ಪ್ರಕಾರ ನೀಡಬೇಕಿರುವ ಹಿಂಬಾಕಿ ಪಾವತಿಸಲು 856 ಕೋಟಿ ರೂಪಾಯಿ ಅಗತ್ಯವಿದ್ದು, ಕೇಂದ್ರ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದರು.