ಜಾವಗಲ್: ಬಾಣಾವರದ ಕಡೆಯಿಂದ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ಎಮ್ಮೆಗಳನ್ನು ಸ್ಥಳೀಯ ಪೊಲೀಸರು ಸೋಮವಾರ ವಶಪಡಿಸಿ ಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
ಟಾರ್ಪಾಲ್ ಮುಚ್ಚಿಕೊಂಡು ಬರುತ್ತಿದ್ದ ಗೂಡ್ಸ್ ವಾಹನವನ್ನು ಜಾವಗಲ್– ಕೆರೆಕೋಡಿಹಳ್ಳಿ ಗೇಟ್ ಸಮೀಪ ಜಾವಗಲ್ ಪಿಎಸ್ಐ ಮಹೇಶ್, ಸಿಬ್ಬಂದಿಯವರಾದ ಪ್ರಭಾಕರ ಮತ್ತು ಆದಿತ್ಯ ಅವರು ವಾಹನವನ್ನು ತಡೆದು ಪರಿಶೀಲಿಸಲಾಗಿ ವಾಹನದೊಳಗೆ 16 ಎಮ್ಮೆಗಳನ್ನು ತುಂಬಿಕೊಂಡು ಬಂದಿದ್ದ ತಿಳಿಯಿತು. ವಾಹನ ಚಾಲಕ ಜಾವಗಲ್ ಹೋಬಳಿ ಮೊಸಳೆ ಗ್ರಾಮದ ಶಿವಕುಮಾರ್ ನನ್ನು ವಿಚಾರಿಸಿದಾಗ ಯಾವುದೇ ಪರವಾನಗಿ ಇಲ್ಲದೆ ಅಜ್ಜಂಪುರ ಸಂತೆಯಿಂದ ಹಾಸನದ ಕಸಾಯಿಖಾನೆಗೆ ತೆಗೆದು ಕೊಂಡು ಹೋಗುತ್ತಿರುವುದಾಗಿ ತಿಳಿದು ಬಂತು.
ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು ವಾಹನ ಚಾಲಕ ಹಾಗೂ ಹೊನ್ನಕುಮಾರನಹಳ್ಳಿಯ ಪ್ರಶಾಂತ ಕುಮಾರ ಎಂಬವರನ್ನು ಬಂಧಿಸಿದರು. ಮತ್ತೊಬ್ಬ ಆರೋಪಿ ಮಹದೇವರಹಳ್ಳಿಯ ಮಂಜೇಗೌಡ ಪರಾರಿಯಾಗಿರುತ್ತಾನೆ. ಈತನೇ ಎಮ್ಮೆ ಗಳನ್ನು ಕೊಂಡು ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ಒಪ್ಪಕೊಂಡಿದ್ದು , ಯಾವುದೇ ಪರವಾನಗಿ ಇಲ್ಲದೇ, ವಾಹನ ಸಾಮರ್ಥ್ಯಕ್ಕಿಂತ ಹೆಚ್ಚಿನ ಎಮ್ಮೆಗಳನ್ನು ತುಂಬಿಕೊಳ್ಳಲಾಗಿದೆ. ಜಾವಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎಮ್ಮೆಗಳು ಮತ್ತು ವಾಹನವನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.