ಬೀದರ್: ನಗರದ ಬಿ.ವಿ.ಬಿ. ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭವನ್ನು 18 ಮತ್ತು 19ರಂದು ಏರ್ಪಡಿಸಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಬಸವರಾಜ ಪಾಟೀಲ್ ಅಷ್ಟೂರು ಮಂಗಳವಾರ ತಿಳಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ರಾಜ್ಯ ಗೃಹ ಕಾರ್ಯದರ್ಶಿಗಳಾಗಿರುವ ರಾಘವೇಂದ್ರ ಔರಾದಕರ್ ಅವರು ಜ. 18ರಂದು ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. 19ರಂದು ಕಾಲೇಜು ಆವರಣದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆ ಅವರ ಪ್ರತಿಮೆಯನ್ನು ಸಂಸದ ಎನ್.ಧರಂಸಿಂಗ್ ಅನಾವರಣ ಮಾಡಲಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗಿರುವ ಭವನವನ್ನು ಗೃಹಸಚಿವ ಆರ್.ಅಶೋಕ್ ಉದ್ಘಾಟಿಸುತ್ತಾರೆ. ಹಾಗೆಯೇ ವಿದ್ಯಾರ್ಥಿನಿಯರ ಹಾಸ್ಟೆಲ್ನ್ನು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಉದ್ಘಾಟನೆ ಮಾಡಲಿದ್ದಾರೆ. ಸ್ಮರಣ ಸಂಚಿಕೆ `ಸುವರ್ಣ ಸಿರಿ~ಯನ್ನು ಧರಂಸಿಂಗ್ ಬಿಡುಗಡೆ ಮಾಡುವರು ಎಂದು ಅವರು ಹೇಳಿದರು.
1960ರಲ್ಲಿ ಕಾಲೇಜು ಆರಂಭವಾದಾಗ 60 ವಿದ್ಯಾರ್ಥಿಗಳಿದ್ದರು. ಈಗ 1500 ವಿದ್ಯಾರ್ಥಿಗಳಿದ್ದಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ವು 50 ವರ್ಷ ಪೂರೈಸಿರುವ ಕಾಲೇಜುಗಳ ನಿರ್ವಹಣೆಗಾಗಿ 25 ಲಕ್ಷ ರೂಪಾಯಿ ನೀಡಿದೆ.
ಹಾಗೆಯೇ ಗ್ರಂಥಾಲಯ ಮತ್ತು ಪ್ರಯೋಗಾಲಯ ಅಭಿವೃದ್ಧಿ ಪಡಿಸುವುದಕ್ಕಾಗಿ 25 ಲಕ್ಷ ರೂಪಾಯಿ, ವಿಸ್ತರಣೆಗಾಗಿ 11 ಲಕ್ಷ, ವಿದ್ಯಾರ್ಥಿನಿಯರ ಕೊಠಡಿಗಾಗಿ ಮೂರು ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.
ಬಿ.ವಿ. ಭೂಮರೆಡ್ಡಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್. ಸಜ್ಜನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಎಸ್. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.