ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಉಡುಪಿ ಮತ್ತು ಸೊಲ್ಲಾಪುರಕ್ಕೆ ಇದೇ 18ರಿಂದ ಹೊಸ ಬಸ್ ಸೇವೆ ಆರಂಭಿಸಲಿದೆ. ಉಡುಪಿಗೆ ಸಾಗುವ ಬಸ್ಸು ಹಾಸನ, ಧರ್ಮಸ್ಥಳ, ಕಾರ್ಕಳ ಮಾರ್ಗವಾಗಿ ಸಾಗಲಿದೆ. ಸೊಲ್ಲಾಪುರಕ್ಕೆ ಹೋಗುವ ಬಸ್ಸು ಚಿತ್ರದುರ್ಗ, ಹೊಸಪೇಟೆ, ವಿಜಾಪುರ ಮಾರ್ಗವಾಗಿ ತೆರಳಲಿದೆ.
ಮೂವತ್ತು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ವಿವರಗಳಿಗೆ 7760990562, 7760990561 ಅಥವಾ 080-22870099 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ದಂಡ ವಸೂಲಿ: ವಿವಿಧ ಮಾರ್ಗಗಳಲ್ಲಿ ಸಾಗುವ ನಿಗಮದ ಬಸ್ಸುಗಳಲ್ಲಿ ಟಿಕೆಟ್ ಇಲ್ಲದೆ ಸಂಚರಿಸುತ್ತಿದ್ದ 8,351 ಮಂದಿ ಪ್ರಯಾಣಿಕರಿಂದ 7,33,518 ರೂಪಾಯಿಗಳನ್ನು ಅಧಿಕಾರಿಗಳು ಡಿಸೆಂಬರ್ ತಿಂಗಳಲ್ಲಿ ವಸೂಲು ಮಾಡಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.