ತುಮಕೂರು: ಪೊಲೀಸರ ವಶದಿಂದ ತಪ್ಪಿಸಿಕೊಂಡಿರುವ ವಿಕೃತಕಾಮಿ, ಸೈಕೋ ಕಿಲ್ಲರ್ ಎಂ. ಶಂಕರ್ ಅಲಿಯಾಸ್ ಜೈಶಂಕರ್ (34) ಎಂಬಾತನ ಸುಳಿವು ಸಿಕ್ಕಲ್ಲಿ ಹತ್ತಿರದ ಠಾಣೆಗಳಿಗೆ ಮಾಹಿತಿ ನೀಡುವಂತೆ ತುಮಕೂರು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯವನಾದ ಈತ ವೃತ್ತಿಯಲ್ಲಿ ಚಾಲಕ. ತಮಿಳುನಾಡಿನಲ್ಲಿ 19 ಕೊಲೆ ಹಾಗೂ ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಹೆದ್ದಾರಿ ಹಾಗೂ ರಸ್ತೆಗಳ ಪಕ್ಕದಲ್ಲಿರುವ ತೋಟದ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ವೆಸಗಿ, ಕೊಲೆ ಮಾಡಿ ಪರಾರಿಯಾಗುತ್ತಿದ್ದಾನೆ. ಈತನ ಕೃತ್ಯಕ್ಕೆ ಅಡ್ಡಬಂದವರನ್ನೂ ಕೊಲೆ ಮಾಡುತ್ತಾನೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ತನ್ನಲ್ಲಿಟ್ಟಿಕೊಂಡಿರುವ ಕಪ್ಪು ಬ್ಯಾಗ್ನಲ್ಲಿ ಮಚ್ಚನ್ನು ಸದಾ ಇಟ್ಟುಕೊಂಡಿರುತ್ತಾನೆ. ತುಮಕೂರು ಮತ್ತು ಚಿತ್ರದುರ್ಗದಲ್ಲಿ ಕೂಡ ಈತ ಒಂಟಿ ಮಹಿಳೆಯರನ್ನು ಅತ್ಯಾಚಾರ ಮಾಡಿ, ಕೊಲೆಗೈದಿದ್ದಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 0816-2278000 ಅಥವಾ ತುಮಕೂರು ಗ್ರಾಮಾಂತರ ಸಿಪಿಐ ಓ.ಬಿ. ಕಲ್ಲೇಶಪ್ಪ ಅವರ ಮೊಬೈಲ್-9480802931 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.