ರಾಯಚೂರು: ಸುಸ್ತಿ ಸಾಲ ತೀರಿಸಿ ಹೊಸ ಸಾಲಗಳನ್ನು ಪಡೆಯಿರಿ ಎಂಬ ಧ್ಯೇಯದೊಂದಿಗೆ ಸುಸ್ತಿ ಬಾಕಿಗಳನ್ನು ಬ್ಯಾಂಕ್ ಅದಾಲತ್ ಮೂಲಕ ತೀರಿಸುವ ವಿಶೇಷ ವ್ಯವಸ್ಥೆಗಾಗಿ ಇದೇ 19ರಂದು ನಗರದಲ್ಲಿ `ಬ್ಯಾಂಕ್ ಅದಾಲತ್'ನ್ನು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಆಯೋಜಿಸಿದೆ ಎಂದು ಬ್ಯಾಂಕ್ನ ರಾಯಚೂರು ಪ್ರಾದೇಶಿಕ ಕಚೇರಿಯ ಸಹ ಪ್ರಧಾನ ವ್ಯವಸ್ಥಾಪಕ ಕೆ ಬಾಲಕೃಷ್ಣ ಪ್ರಸಾದ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಸ್ಬಿಎಚ್ ಮುಖ್ಯ ಶಾಖೆ, ಎಪಿಎಂಸಿಯಲ್ಲಿರುವ ಎಸ್ಬಿಎಚ್ ಶಾಖೆ, ಜವಾಹರನಗರದಲ್ಲಿರುವ ಎಸ್ಬಿಎಚ್ ಶಾಖೆ ಹಾಗೂ ರೈಲ್ವೆ ಸ್ಟೇಶನ್ ರಸ್ತೆಯಲ್ಲಿರುವ ಎಸ್ಬಿಎಚ್ ಶಾಖೆಯಲ್ಲಿ ಈ ಬ್ಯಾಂಕ್ ಅದಾಲತ್ 19ರಂದು ನಡೆಯಲಿದೆ ಎಂದು ತಿಳಿಸಿದರು.
ಗ್ರಾಹಕರ ಅನುಕೂಲ ಮತ್ತು ಅಗತ್ಯಕ್ಕೆ ಸ್ಪಂದಿಸುವ ದಿಶೆಯಲ್ಲಿ ಎಸ್ಬಿಎಚ್ ಬ್ಯಾಂಕ್ ಹೆಚ್ಚಿನ ಸಾಲ ದೊರಕಸಿದೆ. ಆದರೆ, ನಿರ್ದಿಷ್ಟ ಪ್ರಮಾಣದಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ. ಸಂಬಂಧಪಟ್ಟ ಗ್ರಾಹಕರಿಗೆ ಈ ಬಗ್ಗೆ ನೋಟಿಸ್ ನೀಡಿ ಸಾಲ ಮರುಪಾವತಿಗೆ ಕೋರಲಾಗಿದೆ. ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರಕಿಲ್ಲ. ಈ ರೀತಿ ಸಾಲ ಮರುಪಾವತಿ ಆಗದೇ ಇರುವುದು ಬ್ಯಾಂಕ್ಗೆ ಹೊರೆಯಾಗಿ ಪರಿಣಮಿಸಿದ್ದು, ಸಾಲದ ಒತ್ತಡದಿಂದ ಬಳಲುವ ಸ್ಥಿತಿ ಬಂದಿದೆ ಎಂದರು.
ಹೀಗಾಗಿ ಎಸ್ಬಿಎಚ್ ಹೈದರಾಬಾದ್ ಕರ್ನಾಟಕ ಭಾಗದಲ್ಲಿರುವ ಎಲ್ಲ ಶಾಖೆಗಳಲ್ಲಿ ಈ ರೀತಿ ಬ್ಯಾಂಕ್ ಅದಾಲತ್ ಆಯೋಜಿಸಿ ಸಾಲ ಮರುಪಾವತಿಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದೆ. ಬ್ಯಾಂಕ್ ಅದಾಲತ್ ಎಂಬುದು ಸಾಲ ವಸೂಲಿಗೆ ಬ್ಯಾಂಕ್ ಅನುಸರಿಸುವ ಒಂದು ವ್ಯವಸ್ಥೆ. ಇದು ಬ್ಯಾಂಕ್ಗಳಿಗೆ ಮತ್ತು ಸಾಲ ಪಡೆದವರು ಇಬ್ಬರಿಗೂ ಅನುಕೂಲಕರ ಸೂತ್ರದಡಿ ರೂಪಗೊಂಡ ವ್ಯವಸ್ಥೆಯಾಗಿದ್ದು, ಗ್ರಾಹಕರು ಈ ಬ್ಯಾಂಕ್ ಅದಾಲತ್ಗೆ ಸ್ಪಂದಿಸಿ ಸಾಲ ಮರುಪಾವತಿ ಮಾಡಬೇಕು ಎಂದು ಮನವಿ ಮಾಡಿದರು.
ದೊಡ್ಡ ಮತ್ತು ಸಣ್ಣ ಸಾಲಗಾರರಿಬ್ಬರಿಗೂ ಈ ಬ್ಯಾಂಕ್ ಅದಾಲತ್ನಲ್ಲಿ ಅವಕಾಶವಿದೆ. ಬ್ಯಾಂಕ್ ಅದಾಲತ್ನಲ್ಲಿ ಸಾಲ ಮರುಪಾವತಿ ಮಾಡಿದರೆ ಮತ್ತೆ ಅಂಥ ಗ್ರಾಹಕರಿಗೆ ಸಾಲ ದೊರಕಿಸುವ ವ್ಯವಸ್ಥೆ ಮಾಡಲಿದೆ. ವಿಶೇಷವಾಗಿ ಬ್ಯಾಂಕ್ನಿಂದ ಸಾಲ ಪಡೆದು ಸ್ವಯಂ ಉದ್ಯೋಗ ಕೈಗೊಂಡು ನಷ್ಟ ಅನುಭವಿಸುತ್ತ ಸಾಲ ಮರುಪಾವತಿಗೆ ಕಷ್ಟ ಪಡುತ್ತಿದ್ದರೆ ಅಂಥವರು ಈ ಅದಾಲತ್ನಲ್ಲಿ ಸಾಲ ಮರುಪಾವತಿ ಮಾಡಿದರೆ ಅಂಥವರಿಗೆ ಮತ್ತೆ ಅವರ ಉದ್ಯೋಗ ಉತ್ತೇಜನಕ್ಕೆ ಮತ್ತೆ ಸಾಲ ದೊರಕಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಬ್ಯಾಂಕ್ ಸಂಕಷ್ಟದಿಂದ ಪಾರು ಮಾಡಿ ಮತ್ತೆ ವ್ಯವಹಾರ ಚುರುಕುಗೊಳಿಸಲು ಈ ವ್ಯವಸ್ಥೆ ಅನಿವಾರ್ಯ ಎಂದರು.ಎಸ್ಬಿಎಚ್ ಮುಖ್ಯ ವ್ಯವಸ್ಥಾಪಕ ಸಿ.ಎಚ್ ಹವಾಲ್ದಾರ, ಆರ್.ಜಿ ಹೆಬ್ಬಾಳಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.