ಮೈಸೂರು: ಮುಕ್ತಕ ಚುಟುಕು ಕವಿಗೋಷ್ಠಿ.. ಯುವ ಕವಿಗೋಷ್ಠಿ.. ಕನ್ನಡ ಕಾವ್ಯ-ಹಾಸ್ಯರಸ ಪ್ರಸಂಗಗಳು.. ದಸರಾ ಕವಿಗೋಷ್ಠಿ.. ಇವು ಈ ಬಾರಿಯ `ದಸರಾ ಕವಿಗೋಷ್ಠಿ~ ವಿಶೇಷಗಳು..
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷ ಡಾ.ಎ.ರಂಗಸ್ವಾಮಿ, `ಅ. 19 ರಿಂದ 22ರ ವರೆಗೆ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ. 19 ರಂದು ಬೆಳಿಗ್ಗೆ 10 ಗಂಟೆಗೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಕವಿಗೋಷ್ಠಿಗೆ ಸಾಹಿತಿ ವೈದೇಹಿ ಚಾಲನೆ ನೀಡುವರು. ವಿದ್ವಾಂಸ ಪ್ರೊ.ಹಂಪ ನಾಗರಾಜಯ್ಯ ಉಪಸ್ಥಿ ತರಿರುವರು. ಈ ಬಾರಿ ಎಲ್ಲ ಜಿಲ್ಲೆಗಳಿಂದಲೂ ಒಬ್ಬ ಕವಿ ಗೋಷ್ಠಿಗೆ ಆಯ್ಕೆ ಮಾಡಲಾಗಿದೆ~ ಎಂದರು.
`ಡಾ.ನಲ್ಲೂರು ಪ್ರಸಾದ್, ಕುಂ.ವೀರಭದ್ರಪ್ಪ, ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಕುಮಾರ ಚಲ್ಯ, ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ಕೆ. ಅನಂತರಾಮು, ಡಾ.ಎನ್.ಕೆ.ರಾಮಶೇಷನ್, ಪ್ರೊ. ಎಚ್.ಎಲ್.ಮಲ್ಲೇಶ್ಗೌಡ, ಕವಿತಾಕೃಷ್ಣ, ಡಾ.ಪಿ.ಕೆ.ರಾಜಶೇಖರ, ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಹಾಗೂ ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಎಚ್.ಜೆ.ಲಕ್ಕಪ್ಪಗೌಡ, ಪ್ರೊ.ಮ.ನ.ಜವರಯ್ಯ, ಡಾ. ಸಿ.ಬಿ. ರಾಮಚಂದ್ರ, ಪ್ರೊ.ಸ.ನ.ಗಾಯತ್ರಿ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ~ ಎಂದರು.
ಗಮನ ಸೆಳೆಯಲಿದೆ ವಿದ್ವತ್ಗೋಷ್ಠಿ
ಮೈಸೂರು: ಇದೇ ಮೊದಲ ಬಾರಿಗೆ ದಸರಾ ಉಪಸಮಿತಿ ಪಟ್ಟಿಗೆ `ದಸರಾ ವಿದ್ವತ್ಗೋಷ್ಠಿ~ಯನ್ನು ಸೇರ್ಪಡೆ ಮಾಡಲಾಗಿದೆ. ಆ ಮೂಲಕ ಜಗತ್ತಿಗೆ ಭಾರತದ ಕೊಡಗೆ ಏನು? ಎಂಬುದನ್ನು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ನಿರ್ಧರಿಸಲಾಗಿದೆ.
`ಅ. 17 ರಿಂದ 19ರ ವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣ ದಲ್ಲಿ ದಸರಾ ವಿದ್ವತ್ಗೋಷ್ಠಿಯನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10ಕ್ಕೆ ಆರಂಭವಾಗುವ ಕಾರ್ಯ ಕ್ರಮವನ್ನು ಅಟಾಮಿಕ್ ಎನರ್ಜಿ ಕಮಿಷನ್ನ ಮಾಜಿ ಮುಖ್ಯಸ್ಥ ಡಾ.ಎಂ.ಆರ್. ಶ್ರೀನಿವಾಸನ್ ಉದ್ಘಾಟಿಸಲಿದ್ದಾರೆ~ ಎಂದು ಉಪ ಸಮಿತಿ ಕಾರ್ಯಾಧ್ಯಕ್ಷ ಡಾ.ಶೆಲ್ವಪಿಳ್ಳೈ ಐಯ್ಯಂಗಾರ್ ಶನಿವಾರ ಹೇಳಿದರು.
`ವಿಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನಕ್ಕೆ ಭಾರತೀಯರ ಕೊಡುಗೆ, ಜಗತ್ತಿಗೆ ಮೈಸೂರು ಅರಸರ ಕೊಡುಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾಧನೆಗಳು, ವಿಶ್ವೇಶ್ವರಯ್ಯ ಮತ್ತು ಪ್ರಪಂಚಕ್ಕೆ ಅವರ ಕೊಡುಗೆ, ಮಹಾರಾಜ ಆಡಳಿತ ಅವಧಿಯಲ್ಲಿ (1881-1947ರ ವರೆಗೆ) ನಡೆದಿರುವ ಅಭಿವೃದ್ಧಿಗಳು, ಗಣಿತಕ್ಕೆ ಭಾರತೀಯರ ಕೊಡುಗೆ, ಲೋಹವಿಜ್ಞಾನದಲ್ಲಿ ಭಾರತೀಯರ ಕೊಡುಗೆ, ಭಾರತೀಯ ಕಲೆಗಳ ಅಗತ್ಯ, ಭಾರತೀಯ ಆರ್ಕಿಟೆಕ್ಟ್ನ ಇಣುಕುನೋಟ, ಕಲೆ ಮತ್ತು ನರರೋಗ ನಿವಾರಣೆಯಲ್ಲಿ ಸಂಗೀತದ ಪಾತ್ರ, ವೈದ್ಯಕೀಯ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ, ಯೋಗ ಮತ್ತು ನ್ಯಾಚುರೋಪಥಿ, ಭಾರತೀಯ ಸಾಹಿತ್ಯದ ಅಗತ್ಯ, ಅರ್ಥಶಾಸ್ತ್ರಕ್ಕೆ ಭಾರತೀಯರ ಕೊಡುಗೆ ವಿಷಯಗಳ ಕುರಿತು ತಜ್ಞರು ಉಪನ್ಯಾಸ ಮಂಡಿಸಲಿದ್ದಾರೆ~ ಎಂದರು.
`ಪ್ರೊ.ಶಡಗೋಪನ್, ಪ್ರೊ.ಸುಹೀಲಾ ಅರಸ್, ಪ್ರೊ.ಗಜಾನನ ಶರ್ಮಾ, ಪ್ರೊ.ಜಮುನಾ, ನಾರಾಯಣ, ಡಾ.ವಿಷಿ ನಾರಾಯಣ, ಡಾ.ಎಸ್. ಬಾಲಚಂದ್ರ ರಾವ್, ಪ್ರೊ.ಶಾರದಾ ಶ್ರೀನಿವಾಸನ್, ಪ್ರೊ.ಪಿರೆ ಸೈಲವೇನ್ ಫಿಲಿಝಾಟ್, ಪ್ರೊ. ಜಮಕೇಡ್ಕರ್, ಡಾ.ಅನಿಲ್ ಸಾಂಗ್ಲಿ, ಎಸ್. ಶ್ರೀಪಾದ, ಪ್ರೊ.ನಾಗೇಂದ್ರ, ವಚನಾನಂದ ಗುರೂಜಿ, ಪ್ರೊ.ಎಚ್.ವಿ.ನಾಗರಾಜರಾವ್, ಪ್ರೊ.ಗೋಪಾಲ್ಸಿಂಗ್ ಮಾತನಾಡಲಿದ್ದಾರೆ~ ಎಂದು ತಿಳಿಸಿದರು.
ಬಿಇಒ ಆರ್.ರಘುನಂದನ್, ಉಪ ಸಮಿತಿ ಸದಸ್ಯೆ ಡಾ.ಸರಸ್ವತಿ ಇದ್ದರು.
ಕವಿಗೋಷ್ಠಿ ಎಲ್ಲಿ?: ಅ. 19 ರಂದು ಮಧ್ಯಾಹ್ನ 12 ಗಂಟೆಗೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಮುಕ್ತಕ ಕವಿಗೋಷ್ಠಿ, 20 ರಂದು ಬೆಳಿಗ್ಗೆ 10.30 ಗಂಟೆಗೆ ಜಯಲಕ್ಷ್ಮಿಪುರಂನ ವಿವೇಕಾನಂದ ಸಭಾಂಗಣದಲ್ಲಿ ಯುವ ಕವಿಗೋಷ್ಠಿ, 21ರಂದು ಬೆಳಿಗ್ಗೆ 10.30 ಗಂಟೆಗೆ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಕಾವ್ಯ; ಹಾಸ್ಯರಸ ಪ್ರಸಂಗಗಳು ಹಾಗೂ 22 ರಂದು ಬೆಳಿಗ್ಗೆ 11 ಗಂಟೆಗೆ ಜಗನ್ಮೋಹನ ಅರಮನೆ ಸಭಾಂಗಣ ದಲ್ಲಿ ನಡೆಯಲಿದೆ.
ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಪ್ಯಾಕೇಜ್ ಟೂರ್
ನಾಡಹಬ್ಬ ಮೈಸೂರು ದಸರಾ ಉತ್ಸವ ವೀಕ್ಷಣೆಗೆ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ `ಪ್ಯಾಕೇಜ್ ಪ್ರವಾಸ~ ಸೌಲಭ್ಯ ಕಲ್ಪಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟ- 325 ಕಿ.ಮೀ. ಬೆಳಿಗ್ಗೆ 6.30ಕ್ಕೆ ನಿರ್ಗಮನ, ದೊಡ್ಡವರಿಗೆ ರೂ. 315 ಮತ್ತು ಮಕ್ಕಳಿಗೆ ರೂ. 160.
ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್ಎಸ್ ಜಲಾಶಯ- 350 ಕಿ.ಮೀ. ಬೆಳಿಗ್ಗೆ 6.30 ಗಂಟೆಗೆ ನಿರ್ಗಮನ. ದೊಡ್ಡವರಿಗೆ ರೂ. 335 ಮತ್ತು ಮಕ್ಕಳಿಗೆ ರೂ. 170.
ದೇವದರ್ಶಿನಿ: ನಂಜನಗೂಡು, ತಲಕಾಡು, ಮುಡುಕುತೊರೆ, ಸೋಮನಾಥ ಪುರ, ಶ್ರೀರಂಗಪಟ್ಟಣ, ಕೆಆರ್ಎಸ್-250 ಕಿ.ಮೀ. ಬೆಳಿಗ್ಗೆ 6.30 ಗಂಟೆಗೆ ನಿರ್ಗಮನ. ದೊಡ್ಡವರಿಗೆ ರೂ. 225 ಮತ್ತು ಚಿಕ್ಕವರಿಗೆ ರೂ. 115.
ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಅವತಾರ್ ಕೌಂಟರ್ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ವಿವರಗಳಿಗೆ ಮೊ. 7760990822 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.